ಪತ್ನಿ, ಆಕೆಯ ಪ್ರಿಯಕರನನ್ನು ಕೊಂದ ಶಿಕ್ಷಕ ! | Janata news
ದಾವಣಗೆರೆ : ದಾವಣಗೆರೆಯಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿತ್ತು. ಅಕ್ರಮ ಸಂಬಂಧವಿಟ್ಟುಕೊಂಡಿದ್ದ ತನ್ನ ಹೆಂಡತಿ ಮತ್ತು ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದ ವ್ಯಕ್ತಿಯನ್ನು ಎರಡು ದಿನಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪತ್ನಿಯ ಅನೈತಿಕ ಸಂಬಂಧದ ವಿಷಯವಾಗಿ ಶಿಕ್ಷಕನೊಬ್ಬ ತನ್ನ ಸಹೋದರನ ಜೊತೆ ಸೇರಿ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಲೆ ಮಾಡಿದ್ದಾನೆ.
ಕಾರಿಗನೂರು ಶ್ವೇತಾ (26) ಹಾಗೂ ವೇದಮೂರ್ತಿ (29) ಕೊಲೆಯಾದವರು. ಹೊಳಲ್ಕೆರೆ ನಿವಾಸಿ, ಖಾಸಗಿ ಶಾಲೆಯೊಂದರ ಶಿಕ್ಷಕ ಶಿವಕುಮಾರ್ (32) ಬಂಧಿತ ಆರೋಪಿ.
ಶಿವಕುಮಾರ್ ಪತ್ನಿ ಶ್ವೇತಾ, ವೇದಮೂರ್ತಿಯೊಂದಿಗೆ ಕಳೆದ ಆರು ತಿಂಗಳಿನಿಂದ ಓಡಾಡಿಕೊಂಡಿದ್ದರು, ಶಿವಕುಮಾರ್ ಗೆ ವಿಷಯ ತಿಳಿದು, ತನ್ನ ತಮ್ಮನನ್ನು ಕರೆದುಕೊಂಡು ಹೊನ್ನಾಳಿಗೆ ಹೋಗಿ, ಹೊನ್ನಾಳಿ ಹೊಳೆ ದಂಡೆ ಬಳಿ ಅ.28ರಂದು ವೇದಮೂರ್ತಿಯನ್ನು ಕತ್ತು ಹಿಸುಕಿ ಸಾಯಿಸಿ ನೀರಿನಲ್ಲಿ ಎಸೆದು ಹೋಗಿದ್ದರು.
ಬಳಿಕ ನಮ್ಮ ಮೇಲೆ ಆಪಾದನೆ ಬರುತ್ತದೆ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಹೆಂಡತಿಯನ್ನು ನಂಬಿಸಿದ್ದ. ಶಿವಕುಮಾರ್ ಪತ್ನಿಯನ್ನು ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಗೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿ ಸಾಯಿಸಲು ಸಾಧ್ಯವಾಗದೇ, ರಾಜಗೊಂಡನಹಳ್ಳಿ ಗ್ರಾಮದ ತೋಟದ ಬಳಿ ಉಸಿರುಗಟ್ಟಿಸಿ ಅ.29ರಂದು ಕೊಲೆ ಮಾಡಿ ಅನುಮಾನ ಬಾರದಂತೆ ಬಾವಿಯಲ್ಲಿ ಎಸೆದು ಹೋಗಿದ್ದ.
ಪ್ರಕರಣ ದಾಖಲಾದ 48 ಗಂಟೆಗಳಲ್ಲಿ, ಬೆಂಗಳೂರಿನ ಸಹೋದರಿ ಮನೆಯಲ್ಲಿದ್ದ ಆರೋಪಿ ಶಿವಕುಮಾರ್ನನ್ನು ಭಾನುವಾರ ಪೊಲೀಸರ ತಂಡ ಬಂಧಿಸಿದೆ.