ಮದ್ವೆಯಾಗುವುದಾಗಿ ನಂಬಿಸಿ ಮೋಸ: ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ! | Janata news
ಮಂಡ್ಯ : ಮದುವೆಯಾಗುವುದಾಗಿ ನಂಬಿಸಿದ್ದ ವ್ಯಕ್ತಿ ಮೋಸ ಮಾಡಿದ್ದರಿಂದ ಮನನೊಂದ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಬೋರಾಪುರ ಗ್ರಾಮದಲ್ಲಿ ನಡೆದಿದೆ.
ತಾಯಿ ನೇತ್ರಾವತಿ (30), ಮಕ್ಕಳಾದ ಶೋಭಿತಾ (9), ನಂದೀಶ್ (7) ಸಾವಿಗೀಡಾದವರು.
ನೇತ್ರಾವತಿ ತನ್ನ ಪತಿ ಸೋಮನನ್ನು ಕಳೆದುಕೊಂಡು, ಇಬ್ಬರು ಮಕ್ಕಳ ಜತೆ ಇದ್ದರು. ಅದೇ ಗ್ರಾಮದ ಆನಂದ್ ಎಂಬಾತ ನೇತ್ರಾವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಈ ನಡುವೆ ಆನಂದ್ ಬೇರೆ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದ. ಈ ಸಂಬಂಧ ಗ್ರಾಮದಲ್ಲಿ ರಾಜಿ ಪಂಚಾಯಿತಿಯೂ ನಡೆದಿತ್ತು.
ಆದರೆ ತನಗೆ ನ್ಯಾಯಸಿಗಲಿಲ್ಲ, ಮೋಸ ಹೋದೆ ಎಂದು ನೊಂದ ನೇತ್ರಾವತಿ ಇಬ್ಬರೂ ಮಕ್ಕಳಿಗೆ ವಿಷ ಉಣಿಸಿ, ತಾನೂ ಸೇವಿಸಿದ್ದರು. ನೇತ್ರಾವತಿ ಹಾಗೂ ಶೋಭಿತಾ ಮಂಡ್ಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತರಾಗಿದ್ದರೆ, ನಂದೀಶ್ ಮೈಸೂರು ಕೆ.ಆರ್. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.