ಹಾಸನದಲ್ಲಿ ಸಬ್ ಇನ್ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿದ ರೌಡಿ ಶೀಟರ್! | Janata news
ಹಾಸನ : ಹಾಸನದ ಹೊರವಲಯದ ಕೃಷ್ಣ ನಗರದಲ್ಲಿ ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ನಡೆಸಿ ಆತನನ್ನು ಬಂಧಿಸಿದ್ದಾರೆ.
ಗ್ರಾಮಾಂತರ ಠಾಣೆ ಪಿಎಸ್ಐ ಬಸವರಾಜ್ ಮೇಲೆ ಹಲ್ಲೆ ಮಾಡಿದ ರೌಡಿಶೀಟರ್ ಸುನೀಲ್ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದು ಗಾಯಗೊಂಡ ಆರೋಪಿಯನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅರೆಕಲ್ಲು ಹೊಸಹಳ್ಳಿಯ ಸುನೀಲ್ (32) ಮಾರಣಾಂತಿಕ ಹಲ್ಲೆ ಸೇರಿ 7 ಪ್ರಕರಣಗಳ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುನಿಲ್ ನನ್ನು ಬಂಧಿಸಲು ಹುಡುಕುತ್ತಿದ್ದರು.
ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಬಸವರಾಜ್, ಖಚಿತ ಮಾಹಿತಿಯ ಮೇರೆಗೆ ಸುನೀಲ್ ಸೇರಿದಂತೆ ಆರು ಮಂದಿ ಹಾಸನ ಹೊರವಲಯದ ಕೃಷ್ಣ ನಗರದ ಬಳಿ ಇರುವುದನ್ನು ದೃಢಪಡಿಸಿಕೊಂಡು, ಅವರನ್ನು ಬಂಧಿಸಲು ತೆರಳಿದ್ದರು.
ಪಿಎಸ್ಐ ಬಸವರಾಜ್ ಮದ್ಯಪಾನ ಮಾಡುತ್ತಾ ಕುಳಿತಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲು ಮುಂದಾದಾಗ ಮೂವರು ಆರೋಪಿಗಳು ಪರಾರಿಯಾಗಿದ್ದು ಇಬ್ಬರನ್ನು ವಶಕ್ಕೆ ಪಡೆದರು. ಆದರೆ ಪ್ರಮುಖ ಆರೋಪಿ ಸುನೀಲ್ ತಪ್ಪಿಸಿಕೊಳ್ಳಲು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಸವರಾಜು ಅವರ ಎಡಗೈ ಮತ್ತು ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ. ಗಾಯಗೊಂಡಿರುವ ಸಬ್ ಇನ್ಸ್ಪೆಕ್ಟರ್ ಬಸವರಾಜು ಹಿಮ್ಸ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಮಯದಲ್ಲಿ, ಪರಿಸ್ಥಿತಿ ನಿಯಂತ್ರಿಸಲು ಸಿಪಿಐ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ ಆ ನಂತರವೂ ಆರೋಪಿ ದಾಳಿ ಮಾಡಲು ಪ್ರಯತ್ನಿಸಿದ್ದಾನೆ. ಹೀಗಾಗಿ ಸುನಿಲ್ ಮೇಲೆ ಗುಂಡು ಹಾರಿಸಿದ್ದಾರೆ. ಕಾಲಿಗೆ ಗುಂಡು ತಗುಲಿದ್ದು, ಸುನಿಲ್ ನನ್ನು ಬಂಧಿಸಲಾಗಿದೆ.
ಆಸ್ಪತ್ರೆಗೆ ಎಸ್ ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.