ಯೋಗೇಶ್ ಗೌಡ ಹತ್ಯೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ವಶಕ್ಕೆ ಪಡೆದ ಸಿಬಿಐ! | Janata news
ಧಾರವಾಡ : ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣ (2016)ಕ್ಕೆ ಸಂಬಂಧಿಸಿ ವಿಚಾರಣೆ ಕೈಗೆತ್ತಿಕೊಂಡಿರುವ ಸಿಬಿಐ ಬೆಳಗ್ಗೆಯೇ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದೆ. ನವೆಂಬರ್ 7ರಂದು ಜನ್ಮದಿನ ಆಚರಿಸಿಕೊಳ್ಳಲಿದ್ದ ವಿನಯ್ ಕುಲಕರ್ಣಿ ಸದ್ಯ ಸಿಬಿಐ ವಶದಲ್ಲಿದ್ದಾರೆ.
ಇಂದು ಬೆಳಗ್ಗೆ ವಿನಯ್ ಕುಲಕರ್ಣಿ ನಿವಾಸಕ್ಕೆ ಭೇಟಿ ನೀಡಿದ ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದು ಧಾರವಾಡ ಉಪನಗರ ಠಾಣೆಗೆ ಕರೆದೊಯ್ದಿದ್ದಾರೆ.
2016ರಲ್ಲಿ ಧಾರವಾಡದ ಸಪ್ತಾಪುರದಲ್ಲಿ ಯೋಗೇಶ್ ಗೌಡ ಮಾಲೀಕತ್ವದ ಜಿಮ್ ಬಳಿ ಯೋಗೇಶ್ ಗೌಡ ಹತ್ಯೆ ನಡೆದಿತ್ತು. ಸೆಪ್ಟೆಂಬರ್ 2019ರಲ್ಲಿ ಸಿಬಿಐ ಹತ್ಯೆ ಪ್ರಕರಣದ ವಿಚಾರಣೆ ಆರಂಭಿಸಿತ್ತು. ಈಗ ಈ ಸಂಬಂಧ ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆಯಲಾಗಿದೆ.
2016ರ ಜೂನ್ 15ರಂದು ಸಪ್ತಾಪುರದ ಜಿಮ್ನಲ್ಲಿ, ಹುಬ್ಬಳ್ಳಿ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಕೊಲೆ ನಡೆದಿತ್ತು. ವಿನಯ್ ಕುಲಕರ್ಣಿ ಈ ಕೊಲೆ ಹಿಂದೆ ಕೈವಾಡ ಹೊಂದಿದ್ದಾರೆ ಎಂದು ಆರೋಪಿಸಿ ಯೋಗಿಶ್ಗೌಡ ಸಹೋದರ ಗುರುನಾಥ್ಗೌಡ ಕೇಸ್ ದಾಖಲಿಸಿದ್ದರು.
ಆನಂತರ ಯೋಗಿಶ್ ಗೌಡ ಪತ್ನಿ ಮಲ್ಲಮ್ಮ, ಈ ಪ್ರಕರಣವನ್ನ ಸಿಬಿಐಗೆ ನೀಡಲು ಮನವಿ ಮಾಡಿದ್ದರು. ಕೇಸ್ ಸಿಬಿಐಗೆ ವರ್ಗಾವಣೆಗೊಂಡು, ತನಖೆ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಪ್ರಕರಣದ ಆರೋಪಿ ಬಸವರಾಜ್ ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಅದರಂತೆ ಹೈಕೋರ್ಟ್ ಸಿಬಿಐ ತನಿಖೆಗೆ ತಡೆ ನೀಡಿತ್ತು. ಇದನ್ನ ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಬಳಿಕ ಹೈಕೋರ್ಟ್ ಸ್ಟೇಯನ್ನ ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.
ಯೋಗೇಶ್ ಗೌಡ ಕೊಲೆ ನಡೆದ ಸಂದರ್ಭದಲ್ಲಿ ವಿನಯ್ ಕುಲಕರ್ಣಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದರು. ಈ ವಿಷಯ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿತ್ತು.