ಅಡುಗೆ ಭಟ್ಟನ ಹೊತ್ತೊಯ್ದು ತಿಂದು ಹಾಕಿದ ನರಭಕ್ಷಕ ಚಿರತೆ ! | Janata news
ಕೊಪ್ಪಳ : ದೇಗುಲದ ಅಡುಗೆ ಭಟ್ಟನೊಬ್ಬನ ಮೇಲೆ ಚಿರತೆಯೊಂದು ದಾಳಿ ಮಾಡಿ ತಿಂದು ಹಾಕಿರುವ ಹೃದಯವಿದ್ರಾವಕ ಘಟನೆ ಘಟನೆ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಆನೆಗೊಂದಿ ಗ್ರಾಮದ ನಿವಾಸಿ, ಮೇಗೋಟೆಯಲ್ಲಿರುವ ದುರ್ಗಾ ಬೆಟ್ಟದ ದೇಗುಲದ ಅಡುಗೆ ಭಟ್ಟ ಹುಲುಗೇಶ ಈರಪ್ಪ ಮಡ್ಡೇರ (23) ಎಂದು ಗುರುತಿಸಲಾಗಿದೆ.
ಮೇಗೋಟೆ ದುರ್ಗಾ ಬೆಟ್ಟದ ದೇಗುಲವೊಂದರಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ ಹುಲಗೇಶ್ ಈರಪ್ಪ ಮಡ್ಡೇರ್, ಆದಿಶಕ್ತಿ ದೇಗುಲದಲ್ಲಿ ಅಡುಗೆ ಮಾಡುವ ಕೆಲಸ ಮತ್ತು ಗೋಶಾಲೆಯಲ್ಲಿ ದನ ಕರುಗಳನ್ನು ನೋಡಿಕೊಳ್ಳುತ್ತಿದ್ದ. ಆತ ನಿದ್ದೆಯಲ್ಲಿದ್ದಾಗ ಚಿರತೆ ದಾಳಿ ಮಾಡಿದೆ. ಸುಮಾರು ಒಂದು ಕಿ.ಮೀ ದೂರದ ಕಾಡುಪೊದೆಯೊಳಗೆ ಹೊತ್ತೊಯ್ದು ಯುವಕ ಬಲಗಾಲಿ ತೊಡೆ ಭಾಗ ಮತ್ತು ಕುತ್ತಿಗೆಯನ್ನು ತಿಂದು ಹಾಕಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಆನೆಗೊಂದಿ ಸುತ್ತಮುತ್ತಲಿನ ಜನ ಬೆಚ್ಚಿ ಬಿದ್ದಿದ್ದಾರೆ. ಇತ್ತೀಚೆಗಷ್ಟೆ ದೇವಸ್ಥಾನಕ್ಕೆ ಆಗಮಿಸಿದ್ದ ಬಾಲಕನ ಮೇಲೆ ಚಿರತೆ ದಾಳಿಗೆ ಯತ್ನಿಸಿತ್ತು. ಬಳಿಕ ಅರಣ್ಯಾಧಿಕಾರಿಗಳಿಗಳು ಬೋನು ಇಟ್ಟು ಹೆಣ್ಣು ಚಿರತೆಯನ್ನು ಸೆರೆಹಿಡಿದಿದ್ದರು.
ವಿಷಯ ತಿಳಿದ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲಿಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದು. ದೇಹದ ಅವಶೇಷಗಳು ಪತ್ತೆಯಾಗಿದೆ.