ಪಟಾಕಿಯಿಂದ ಪರಿಸರ ಮಾಲಿನ್ಯ ಆಗುತ್ತೆ ಅನ್ನೋದು ಸುಳ್ಳು :ಪ್ರಮೋದ್ ಮುತಾಲಿಕ್ | Janata news
ಬೆಳಗಾವಿ : ದೀಪಾವಳಿ ಸಂದರ್ಭದಲ್ಲಿ ಪಟಾಕಿ ನಿಷೇಧ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ಪಟಾಕಿ ಸಿಡಿಸುವುದರಿಂದ ಪರಿಸರ ನಾಶವಾಗುತ್ತೆಂಬುದು ಸರಿಯಲ್ಲ. ಪರಿಸರ ನಾಶಕ್ಕೆ ಹಲವಾರು ಕಾರಣಗಳಿವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಧಾರ್ಮಿಕ ವಿಧಿ ವಿಧಾನದಿಂದ ಆಚರಣೆಗಳು ನಡೆಯುವ ಕಾರಣ ಪಟಾಕಿಯನ್ನು ಬ್ಯಾನ್ ಮಾಡಬಾರದು.
ಪಟಾಕಿಯಿಂದ ಮಾತ್ರ ಭಾರೀ ದೊಡ್ಡ ಪ್ರಮಾಣದಲ್ಲಿ ಪರಿಸರ ಮಾಲಿನ್ಯ ಆಗುತ್ತಿದೆ ಎಂಬುದು ಸುಳ್ಳು. ಇವತ್ತು ವಾಹನಗಳಿಂದ ಎಷ್ಟು ಪರಿಸರ ಮಾಲಿನ್ಯ ಆಗುತ್ತಿದೆ ಅದನ್ನು ಯಾರು ತಡೆಯುವ ಪ್ರಯತ್ನ ಮಾಡುತ್ತಿಲ್ಲ.
ಈಗ ಕಾನೂನು ಜಾರಿಗೆ ಮಾಡಲು ಮುಂದಾಗಿರುವವರು ಒಮ್ಮೆ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದರೆ ಉತ್ತಮ. ಏಕೆಂದರೆ ಅಭಿವೃದ್ಧಿಯ ಹೆಸರಿನಲ್ಲಿ ನೀವು ಎಷ್ಟು ಪರಿಸರವನ್ನು ನಾಶ ಮಾಡುತ್ತಿದ್ದೀರಿ ಎಂಬುವುದು ಅರಿವಾಗುತ್ತದೆ. ಆದರೆ ವರ್ಷಕ್ಕೊಮ್ಮೆ ನಡೆಯುವ ಗಣೇಶ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ನಿಷೇಧ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.
ಇನ್ನು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದಾದರೆ ಒಂದು ದಿನ ಪಟಾಕಿ ಹಚ್ಚುವುದರಿಂದ ಆರೋಗ್ಯ ಸಮಸ್ಯೆ ಕಡಿಮೆಯಾಗಲ್ಲ. ವರ್ಷವಿಡಿ ಪಬ್, ಬಾರ್ ತೆರೆಯಲು ಸರ್ಕಾರ ಅವಕಾಶ ನೀಡಿದೆ. ಇದರಿಂದ ರಾಜ್ಯದಲ್ಲಿ ಸಾವಿರಾರು ಹೆಣ್ಣು ಮಕ್ಕಳು ಬೀದಿಗೆ ಬಿದ್ದಿದ್ದಾರೆ.
ಯುವಕರು ದುಶ್ಚಟಕ್ಕೆ ದಾಸರಾಗಿ ಕುಟುಂಬವನ್ನೇ ಬೀದಿಗೆ ತರುತ್ತಿದ್ದಾರೆ. ಇಡೀ ಸಮಾಜವೇ ಹಾಳಾಗುತ್ತಿದೆ. ಆರೋಗ್ಯದ ಬಗ್ಗೆ ಯೋಚನೆ ಮಾಡುವ ಸರ್ಕಾರ ಮದ್ಯಪಾನ ಮಾಡಲು, ಪಬ್, ಬಾರ್ ತೆರೆಯಲು ಯಾಕೆ ಅವಕಾಶ ನೀಡಿದೆ. ಪಟಾಕಿಯಿಂದ ಆರೋಗ್ಯ ಹಾಳಾಗುತ್ತದೆ ಎನ್ನುವುದಾದರೆ ಇವುಗಳ ಬಗ್ಗೆಯೂ ಸರ್ಕಾರ ಯೋಚಿಸಬೇಕಲ್ಲವೇ ಎಂದು ವಾಗ್ದಾಳಿ ನಡೆಸಿದ್ದಾರೆ.