ಶಿರಾ ಎಲೆಕ್ಷನ್ ಮತ ಎಣಿಕೆ, ಇತ್ತ ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರಗೆ ಕೊರೊನಾ ಪಾಸಿಟಿವ್! | Janata news
ತುಮಕೂರು : ಶಿರಾ ವಿಧಾನಸಭೆ ಉಪ ಚುನಾವಣೆಯ ಚುನಾವಣೆಯ ಹಿಂದಿನ ದಿನವೇ ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಅವರು ಕೋವಿಡ್ 19 ಸೋಂಕಿಗೆ ಒಳಗಾಗಿರುವುದು ದೃಢಪಟ್ಟಿದೆ.
ಶಿರಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಜಯಚಂದ್ರ ಅವರು ಸೋಮವಾರ ಮಧ್ಯಾಹ್ನ ತೀವ್ರ ಕೆಮ್ಮು ಕಾಣಿಸಿಕೊಂಡ ಹಿನ್ನೆಲೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು.
ವರದಿಯಲ್ಲಿ ಕೊರೊನಾ ಸೋಂಕು ತಗುಲಿರೋದು ತಿಳಿದುಬಂದಿದೆ. ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಟಿ.ಬಿ.ಜಯಚಂದ್ರ ಅವರ ಪತ್ನಿ ನಿರ್ಮಲಾರಿಗೂ ಕೊರೊನಾ ಸೋಂಕು ತಗುಲಿದೆ.
ತಮಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಸಂಗತಿಯನ್ನು ಜಯಚಂದ್ರ ಟ್ವೀಟ್ ಮಾಡಿ ತಿಳಿಸಿದ್ದಾರೆ. ನನ್ನ ಶ್ರೀಮತಿಯವರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ನಾನು ಕೂಡ ವಿಕ್ರಂ ಆಸ್ಪತ್ರೆಯಲ್ಲಿ ಇಂದು ಪರೀಕ್ಷೆ ಮಾಡಿಸಿದ್ದು. ನನಗೂ ಪಾಸಿಟಿವ್ ಬಂದಿದೆ. ಹೀಗಾಗಿ ನಾಳಿನ ಮತ ಎಣಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ನಿಮ್ಮೆಲ್ಲ ಪರಿಶ್ರಮದಿಂದ ಚುನಾವಣೆ ನಡೆದಿದೆ ಎಂದು ಟಿಬಿ ಜಯಚಂದ್ರ ಹೇಳಿದ್ದಾರೆ.
ನೀವು ಎದೆಗುಂದದೆ ಧೈರ್ಯದಿಂದ ಮತ ಎಣಿಕೆಯಲ್ಲಿ ಪಾಲ್ಗೊಳ್ಳಿ. ನಮ್ಮ ಕಾರ್ಯಕರ್ತರು, ಮುಖಂಡರು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ ಎಂಬ ನಂಬಿಕೆ ಇದೆ. ಆದಷ್ಟು ಬೇಗ ಆಸ್ಪತ್ರೆಯಿಂದ ಬಿಡುಗಡೆಯಾಗಿ ನಿಮ್ಮನ್ನು ಭೇಟಿಯಾಗಿ ಕೃತಜ್ಞತೆ ಹೇಳುವ ಪ್ರಯತ್ನ ಮಾಡುತ್ತೇನೆ. ನಾಳೆ ಜಯ ನಮ್ಮದು, ಜಯ ನಮಗೆ ಕಟ್ಟಿಟ್ಟ ಬುತ್ತಿ. ನನ್ನ ಗೈರು ಹಾಜರಿಗೆ ಯಾರೂ ಬೇಸರ ಪಟ್ಟುಕೊಳ್ಳಬೇಡಿ ಎಂದು ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.