ತಾಲಿಬಾನಿಗಳಂತೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹುಲಿ, ಬಂಡೆ ಎಂದು ಹೆಸರಿಟ್ಟುಕೊಂಡು ಓಡಾಡುತ್ತಿದ್ದಾರೆ | Janata news
ಉಡುಪಿ : ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಾಲಿಬಾನಿಗಳಿಗೆ ಹೋಲಿಸಿದ್ದಾರೆ.
ಸಿದ್ದರಾಮಯ್ಯ, ಡಿಕೆಶಿ ಕೂಡ ಬಂಡೆ, ಹುಲಿ ಅಂತ ಹೆಸರಿಟ್ಟುಕೊಂಡು ಓಡಾಡುತ್ತಿದ್ದಾರೆ. ಚುನಾವಣೆಯ ನಂತರ ಬಂಡೆಯು ಇಲ್ಲ ಹುಲಿಯು ಇಲ್ಲ. ಕಾಂಗ್ರೆಸ್ ಪರಿಸ್ಥಿತಿ ದುಸ್ಥಿತಿಗೆ ತಳ್ಳಲ್ಪಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳುವ ಮೂಲಕ ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರನ್ನು ತಾಲಿಬಾನಿಗಳಿಗೆ ಹೋಲಿಸಿದರು.
ದಕ್ಷಿಣ ಕನ್ನಡ ಉಡುಪಿ ಕೊಡಗು ಜಿಲ್ಲೆಗಳ ಪ್ರಶಿಕ್ಷಣ ವರ್ಗ ಸಭೆಯಲ್ಲಿ ಮಾತನಾಡಿದ ಕಟೀಲ್, ಉಪ ಚುನಾವಣೆ ಸಂದರ್ಭ ಸಿಎಂ ಯಡಿಯೂರಪ್ಪ ಮತ್ತು ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಿದರು. ಮುಂದೆ ಎರಡು ವಿಧಾನಸಭೆ , ಒಂದು ಲೋಕಸಭಾ ಚುನಾವಣೆ ಬರುತ್ತದೆ. ಈ ಚುನಾವಣೆಯಲ್ಲಿ ಬಿಜೆಪಿ ನೂರಕ್ಕೆ ನೂರು ಗೆಲ್ಲುತ್ತದೆ.
ಮುಂದಿನ ಚುನಾವಣೆಗಳಿಗೂ ನಾವು ಪೂರ್ಣ ತಯಾರಿ ಮಾಡಿಕೊಂಡಿದ್ದೇವೆ. ಪಂಚಾಯತ್ ಚುನಾವಣೆಗಳಲ್ಲೂ ಬಿಜೆಪಿ ಶೇ. 80 ಮತ ಪಡೆಯಲಿದೆ ಎಂದರು.
ಸಿಎಂ ಸ್ಥಾನ ಬದಲಾಗುತ್ತೆ ಎಂದು ಜನರಲ್ಲಿ ಗೊಂದಲ ಸೃಷ್ಟಿ ಮಾಡಿದರು. ಬಿಜೆಪಿಯಲ್ಲಿ ಯಡಿಯೂರಪ್ಪ ನಾಯಕತ್ವ ಬದಲಾವಣೆಯ ಚರ್ಚೆಯೇ ಇಲ್ಲ. ಮುಂದಿನ ಎರಡೂವರೆ ವರ್ಷಗಳ ಕಾಲ ಯಡಿಯೂರಪ್ಪನೇ ನಮ್ಮ ಸರ್ವಸಮ್ಮತ ನಾಯಕ ಎಂದು ಘೊಷಿಸಿದರು.