ಆ ಯಮ್ಮ ಏನೂ ಕೆಲಸ ಮಾಡಲ್ಲ.. ಸುಮ್ನೆ ದೇವೇಗೌಡರ ಫ್ಯಾಮಿಲಿ ವಿರುದ್ಧ ಅಂತ ಗೆಲ್ಲಿಸಿದ್ವಿ! | Janata news
ಮಂಡ್ಯ : ಆ ಯಮ್ಮಾ ಏನೂ ಮಾಡಲ್ಲ. ಮಂಡ್ಯದ ಕೆಲಸ ಏನೇ ಇದ್ದರೂ ನನಗೆ ಹೇಳಿ ಎಂದು ಮಂಡ್ಯ ಸಂಸದೆ ಸುಮಲತಾ ಕಾರ್ಯವೈಖರಿ ಬಗ್ಗೆ ಕೊಡಗು-ಮೈಸೂರು ಸಂಸದ ಪ್ರತಾಪ ಸಿಂಹ ಮೊಬೈಲ್ ನಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು-ಮೈಸೂರು ದಶಪಥ ರಸ್ತೆ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿ ಸಂಸದರು ಕೆಲಸ ಮಾಡುವುದಕ್ಕೆ ಬಿಡಲ್ಲವೆಂದು ಸುಮಲತಾ ವಿರುದ್ಧ ಪ್ರತಾಪ್ ಸಿಂಹಗೆ ಅಧಿಕಾರಿಯೊಬ್ಬರು ದೂರು ನೀಡಿದ್ದಾರೆ. ಈ ವೇಳೆ ಅಧಿಕಾರಿ ಜೊತೆ ಕರೆ ಮಾಡಿ ಮಾತನಾಡುವ ವೇಳೆ ಪ್ರತಾಪ್ ಸಿಂಹ ಈ ರೀತಿ ಸುಮಲತಾ ಅವರನ್ನ ಟೀಕಿಸಿ ಮಾತನಾಡಿದ್ದಾರೆ.
ಮಂಡ್ಯದ ಯಾವುದೇ ಕೆಲಸ ಇದ್ದರೂ ನನಗೆ ಹೇಳಿ. ಆ ಯಮ್ಮ ಏನೂ ಕೆಲಸ ಮಾಡುವುದಿಲ್ಲ. ದೇವೇಗೌಡರ ಕುಟುಂಬದವರನ್ನು ಸೋಲಿಸಲು ಅವರನ್ನು ಗೆಲ್ಲಿಸಿದ್ದಾರೆ. ಅವರು ಯಾವ ಕೆಲಸ ಮಾಡುವುದಕ್ಕೂ ಬಿಡುವುದಿಲ್ಲ ಎಂದು ಪ್ರತಾಪ್ ಸಿಂಹ ಹೇಳಿರುವುದನ್ನ ವಿಡಿಯೋದಲ್ಲಿ ಕಾಣಬಹುದು.
ಬೆಂಗಳೂರು-ಮೈಸೂರು ದಶಪಥ ಕಾಮಗಾರಿಯ ಬಗ್ಗೆ ಅಧಿಕಾರಿ ಜೊತೆ ಫೋನ್ನಲ್ಲಿ ಮಾತನಾಡುವ ವೇಳೆ, ಇತರರ ಸಮ್ಮುಖದಲ್ಲೇ ಪ್ರತಾಪ್ ಸಿಂಹ ಈ ರೀತಿ ಹೇಳಿದ್ದಾರೆ ಅಂತ ತಿಳಿದುಬಂದಿದೆ.
ಮಂಡ್ಯ ಜಿಲ್ಲೆ ಯಲಿಯೂರು ಗ್ರಾಮಸ್ಥರ ಅಹವಾಲು ಸ್ವೀಕಾರ ವೇಳೆ ಈ ಪ್ರಸಂಗ ನಡೆದಿದೆ. ಪ್ರತಾಪ್ ಸಿಂಹ ವಿರುದ್ಧ ಸುಮಲತಾ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಾಪ್ ಸಿಂಹ ಅವರು ತಮ್ಮ ಕ್ಷೇತ್ರದ ಸಮಸ್ಯೆ ನೋಡಿಕೊಳ್ಳಲಿ, ನಮ್ಮ ಕ್ಷೇತ್ರದ ಸಮಸ್ಯೆ ಬಗೆಹರಿಸಲು ಅವರು ಬಾರದಿರುವುದೇ ಒಳ್ಳೆಯದು ಎಂದು ಸುಮಲತಾ ಬೆಂಬಲಿಗರು ಕಿಡಿಕಾರುತ್ತಿದ್ದಾರೆ.