ಬಿಡದಿ : ಟೊಯೋಟಾ ಕಂಪನಿ ಆಡಳಿತ ಮಂಡಳಿ, ನೌಕರರ ನಡುವಿನ ಸಮಸ್ಯೆ ಪರಿಹಾರ ಸಭೆ ಯಶಸ್ವಿ | Janata news
ಬೆಂಗಳೂರು : ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪನಿ ಆಡಳಿತ ಮಂಡಳಿ ಮತ್ತು ನೌಕರರ ನಡುವೆ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಲು ಇಂದು ವಿಕಾಸಸೌಧದ ಕಛೇರಿಯಲ್ಲಿ ಕಂಪನಿಯ ಆಡಳಿತ ಮಂಡಳಿ ಪ್ರತಿನಿಧಿ ಹಾಗೂ ಕಾರ್ಮಿಕ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆ ಯಶಸ್ವಿಯಾಗಿದೆ.
ಟೊಯೋಟಾ ಕಿರ್ಲೋಸ್ಕರ್ ಕಂಪನಿ ಆಡಳಿತ ಮಂಡಳಿಯ ಕಾರ್ಮಿಕ ವಿರೋಧಿ ನೀತಿ ಖಂಡಿಸಿ, ಕಳೆದ ವಾರದಿಂದ ಕಂಪನಿ ಕಾರ್ಮಿಕರು ಅಹೋರಾತ್ರಿ ಧರಣಿ ನಡೆಸಿದ್ದರು. ಕೆಲಸದಲ್ಲಿ ಶಿಸ್ತಿನ ನೆಪದಲ್ಲಿ ಆಡಳಿತ ಮಂಡಳಿಯಿಂದ ಕಾರ್ಮಿಕರ ಶೋಷಣೆಯನ್ನು ಖಂಡಿಸಿ ಸುಮಾರು 3500 ಕಾರ್ಮಿಕರು ಕಳೆದ ಅನೇಕ ದಿನಗಳಿಂದಲೂ ಈ ಅಹೊರಾತ್ರಿ ಧರಣಿಯಲ್ಲಿ ಪಾಲ್ಗೊಂಡಿದ್ದರು. ಕಾರ್ಮಿಕ ಸಂಘದ ಪದಾಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಿದ್ದನ್ನು ಖಂಡಿಸಿ ಸಾವಿರಾರು ಕಾರ್ಮಿಕರು ದಿಢೀರ್ ಪ್ರತಿಭಟನೆಗಿಳಿದ ಬೆನ್ನಲ್ಲೇ, ಆಡಳಿತವು ಘಟಕದಲ್ಲಿ ಅನಿರ್ದಿಷ್ಟಾವಧಿಯ ಲಾಕೌಟ್ ಘೋಷಿಸಿತ್ತು.
ಕಂಪನಿಯ ಮ್ಯಾನೇಜ್ಮೆಂಟ್ ಹಾಗೂ ಕಾರ್ಖಾನೆ ನೌಕರರ ನಡುವೆ ಉಲ್ಬಣಗೊಂಡಿರುವ ಸಮಸ್ಯೆ ತಾರಕಕ್ಕೆರಿದ್ದು, ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಲು ಡಿಸಿಎಂ ಡಾ.ಅಶ್ವತನಾರಾಯಣ ಹಾಗೂ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರ ನೇತ್ರತ್ವದಲ್ಲಿ ಈ ಸಭೆ ನಡೆದಿದೆ.
ಈ ಸಭೆಯಲ್ಲಿ ಸಮಸ್ಯೆಯನ್ನು ಯಶಸ್ವಿಯಾಗಿ ಪರಿಹರಿಸಲಾಗಿದ್ದು, ಲಾಕ್ ಔಟ್ ಆಗಿರುವ ಟೊಯೋಟಾ ಕಾರ್ಖಾನೆಯನ್ನು ನಾಳೆಯಿಂದ ಪುನರಾರಂಭಿಸುವಂತೆ ಆಡಳಿತ ಮಂಡಳಿಯ ಪ್ರತಿನಿಧಿಗಳಿಗೆ ಸೂಚಿಸಲಾಯಿತು ಮತ್ತು ಕಾರ್ಮಿಕರು ಸಹಕರಿಸುವಂತೆ ತಿಳಿಸಲಾಯಿತು.
ಈ ಕುರಿತು ಸಂಜೆ ಒಳಗಾಗಿ ಕಾರ್ಮಿಕ ಇಲಾಖೆಯಿಂದ ಆದೇಶ ಹೊರಡಿಸಲಾಗುವುದು, ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟಾದರೆ ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಹಾಗೂ ಕಾರ್ಮಿಕರ ಹಿತ ಕಾಪಾಡುವುದು ನಮ್ಮ ಸರಕಾರದ ಆಧ್ಯ ಕರ್ತವ್ಯವಾಗಿದೆ, ಎಂದು ಹೆಬ್ಬಾರ್ ತಿಳಿಸಿದ್ದಾರೆ.
ಈ ಸಭೆಯಲ್ಲಿ ಮಾಗಡಿ ಶಾಸಕರಾದ ಎ.ಮಂಜುನಾಥ, ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ನ ಆಡಳಿತ ಮಂಡಳಿ ಸದಸ್ಯರು, ಕಂಪನಿಯ ಕಾರ್ಮಿಕ ಪ್ರತಿನಿಧಿಗಳು ಹಾಜರಿದ್ದರು.