ಲಂಡನ್ ನಿಂದ ಮರಳಿ ಪಡೆದ ಶ್ರೀರಾಮ, ಲಕ್ಷ್ಮಣ, ಸೀತಾ ಮಾತೆ ವಿಗ್ರಹ ತಮಿಳುನಾಡಿಗೆ ಹಸ್ತಾಂತರಿಸಿದ ಕೇಂದ್ರ | Janata news
ನವದೆಹಲಿ : ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ಇಂದು ನಡೆದ ಸಮಾರಂಭದಲ್ಲಿ ಭಗವಂತ ಶ್ರೀರಾಮ, ಲಕ್ಷ್ಮಣ ಮತ್ತು ಸೀತಾ ದೇವಿಯ ಕಂಚಿನ ವಿಗ್ರಹಗಳನ್ನು ತಮಿಳುನಾಡಿನ ಐಡಲ್ ವಿಂಗ್ಗೆ ಹಸ್ತಾಂತರಿಸಿದರು. ನವದೆಹಲಿಯ ಧರೋಹರ್ ಭವನದಲ್ಲಿರುವ ಎಎಸ್ಐ ಪ್ರಧಾನ ಕಚೇರಿಯಲ್ಲಿ ಸಚಿವರು ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಮೊದಲು, ಸೆಪ್ಟೆಂಬರ್ 15, 2020 ರಂದು, ಈ ಕಂಚಿನ ವಿಗ್ರಹಗಳನ್ನು ಲಂಡನ್ನ ಮೆಟ್ರೋಪಾಲಿಟನ್ ಪೊಲೀಸರು ಲಂಡನ್ನಲ್ಲಿರುವ ಭಾರತದ ಹೈ ಕಮಿಷನ್ಗೆ ಹಸ್ತಾಂತರಿಸಿದರು. 1958ರಲ್ಲಿ ಮಾಡಿದ ಫೋಟೊ ದಸ್ತಾವೇಜನ್ನು ಪ್ರಕಾರ, ಈ ವಿಗ್ರಹಗಳು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಆನಂದಮಂಗಲದಲ್ಲಿರುವ ಶ್ರೀ ರಾಜಗೋಪಾಲ್ ವಿಷ್ಣು ದೇವಸ್ಥಾನಕ್ಕೆ(ವಿಜಯನಗರ ಅವಧಿಯಲ್ಲಿ ನಿರ್ಮಿಸಲಾದ ದೇವಾಲಯ) ಸೇರಿವೆ. ತಮಿಳುನಾಡು ಪೊಲೀಸರ ವಿಗ್ರಹ ವಿಭಾಗ ನಡೆಸಿದ ತನಿಖೆಯ ಪ್ರಕಾರ ಈ ವಿಗ್ರಹಗಳನ್ನು ಶ್ರೀ ರಾಜಗೋಪಾಲ್ ವಿಷ್ಣು ದೇವಸ್ಥಾನದಿಂದ 23/24 ನವೆಂಬರ್ 1978 ರಂದು ಕಳವು ಮಾಡಲಾಗಿದೆ.
ಭಗವಂತ ಶ್ರೀ ರಾಮ, ಲಕ್ಷ್ಮಣ ಮತ್ತು ಸೀತಾ ದೇವಿಯ ಕಂಚಿನ ವಿಗ್ರಹಗಳು ಭಾರತೀಯ ಲೋಹದ ಕಲೆಯ ಮೇರುಕೃತಿಗಳಾಗಿವೆ ಮತ್ತು ಕ್ರಮವಾಗಿ 90.5 ಸೆಂ, 78 ಸೆಂ, ಮತ್ತು 74.5 ಸೆಂ.ಮೀ. ಎತ್ತರ ಇದೆ. ಶೈಲಿಯಲ್ಲಿ, ಈ ಶಿಲ್ಪಗಳು ಕ್ರಿ.ಶ 13 ನೇ ಶತಮಾನಕ್ಕೆ ಸೇರಿದವು, ಎಂದು ಪಿಐಬಿ ಪ್ರಕಟನೆಯಲ್ಲಿ ತಿಳಿಸಿದೆ.
ಹಸ್ತಾಂತರಿಸುವ ಸಮಾರಂಭದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ, 2014 ರಿಂದ ಇಲ್ಲಿಯವರೆಗೆ ಒಟ್ಟು 40 ಪ್ರಾಚೀನ ವಸ್ತುಗಳನ್ನು ವಿದೇಶಗಳಿಂದ ಭಾರತಕ್ಕೆ ಮರುಪಡೆಯಲಾಗಿದೆ. ಆದರೆ, 1976 ರಿಂದ 2014 ರ ಅವಧಿಯಲ್ಲಿ ಕೇವಲ 13 ಇಂತಹ ಪ್ರಾಚೀನ ವಸ್ತುಗಳನ್ನು ಮಾತ್ರ ಮರುಪಡೆಯಲು ಸಾಧ್ಯವಾಗಿದೆ, ಎಂದಿದ್ದಾರೆ.
ಈ ವಿಗ್ರಹಗಳನ್ನು ದೇಶಕ್ಕೆ ತರುವಲ್ಲಿ ಅವರ ನಿರಂತರ ಪ್ರಯತ್ನಗಳಿಗಾಗಿ ಭಾರತದ ಪುರಾತತ್ವ ಸಮೀಕ್ಷೆ, ತಮಿಳುನಾಡು ಸರ್ಕಾರದ ವಿಶೇಷ ಐಡಲ್ ವಿಂಗ್, ಡಿಆರ್ಐ ಮತ್ತು ಲಂಡನ್ ನ ಭಾರತದ ಹೈ ಕಮಿಷನ್ ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಾಂಸ್ಕೃತಿಕ ಸಚಿವಾಲಯ, ಎಎಸ್ಐ ಮತ್ತು ತಮಿಳುನಾಡು ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.