ನನ್ನ ಸರ್ಕಾರವನ್ನ ಯಾವನೂ ಪರ್ಸಂಟೇಜ್ ಸರ್ಕಾರ ಅಂತಾ ಹೇಳಲು ಸಾಧ್ಯ ಇಲ್ಲ: ಹೆಚ್ ಡಿ ಕುಮಾರಸ್ವಾಮಿ | Janata news
ಬೆಂಗಳೂರು : ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ. ಆದರೆ, ಜನರು ಮಾತ್ರ ನನ್ನ ಕೈಹಿಡಿಯುತ್ತಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರದ ವಾರ್ಡ್ ಜೆಡಿಎಸ್ ಕಚೇರಿ ಉದ್ಘಾಟನೆಯನ್ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೆರವೇರಿಸಿದರು. ಕಾರ್ಯಕರ್ತರು ಹಾಗೂ ದಾಸರಹಳ್ಳಿ ಕ್ಷೇತ್ರದ ಮತದಾರರನ್ನ ಉದ್ದೇಶಿಸಿ ಕುಮಾರಸ್ವಾಮಿ ಮಾತನಾಡಿ, ದಾಸರಹಳ್ಳಿ ಗೆ ಕುಡಿಯುವ ನೀರಿಗಾಗಿ 36 ಲಕ್ಷ ಗ್ರ್ಯಾಂಟ್ ನೀಡಿದ್ದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂದು ಜಾರಿಗೆ ತಂದೆ.
ನಗರದ ಹೊರ ವಲಯದಲ್ಲಿ ಡಾಂಬರೀಕರಣ, ಕಾವೇರಿ ನೀರು ಪೂರೈಕೆಗೆ ಜೆಡಿಎಸ್ ಕಾರಣ. ನಾನು 25 ಸಾವಿರ ಕೋಟಿ ರೂ ಹಣವನ್ನು ಸಾಲ ಮನ್ನಾಗೆಂದು ಕ್ರೋಡಿಕರಿಸಿ ಕೊಟ್ಟೆ ಎಂದು ಹೇಳಿಕೊಂಡರು.
ಕೆರೆಯನ್ನು ನುಂಗಿ ಅಧಿಕಾರಿಗಳು, ರಾಜಕಾರಣಿಗಳು ಹೈಫೈ ಕಾಲೋನಿ ಮಾಡಿಕೊಂಡಿದ್ದರು. ಇದರಿಂದಾಗಿ ಅಕ್ಕ ಪಕ್ಕದ ಜನರು ಮಳೆ ಬಂದ್ರೆ ಸಾಕು ನೀರು ತುಂಬಿಕೊಂಡು ತೊಂದರೆ ಎದುರಿಸುತ್ತಿದ್ದರು. ಈ ಬಗ್ಗೆ ಕ್ರಮ ಕೈಗೊಂಡು, ಸಮಸ್ಯೆಯನ್ನು ನನ್ನ ಅವಧಿಯಲ್ಲಿ ಬಗೆಹರಿಸಿದ್ದೆ. ಈ ಖುಷಿಯಲ್ಲಿ ಹೆಲಿಕ್ಯಾಪ್ಟರ್ ನಲ್ಲಿ ಹೂಮಳೆಯನ್ನೇ ಸುರಿಸಿದ್ದರು. ವಿಪರ್ಯಾಸ ಅಂದ್ರೆ ಚುನಾವಣೆಯಲ್ಲಿ ಜನರು ಮಾತ್ರ ನಮ್ಮ ಪಕ್ಷಕ್ಕೆ ಮತ ಹಾಕಲೇ ಇಲ್ಲ. ಏನೂ ಕೆಲಸ ಮಾಡದವರಿಗೆ ಮಾತ್ರ ವೋಟು ಹಾಕಿ ಗೆಲ್ಲಿಸುತ್ತಾರೆ. ಇದು ಇಂದಿನ ಪರಿಸ್ಥಿತಿ ಎಂದು ನೋವು ತೋಡಿಕೊಂಡರು.
ನಾಡಿನ ಜನತೆಗೆ ಕೆಲ ವಿಚಾರಗಳನ್ನು ತಿಳಿಸಲು ಬಯಸುವೆ. ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ. ಬೆಂಗಳೂರಿನ ಅಭಿವೃದ್ಧಿ ಬಗ್ಗೆ ತಿಳುವಳಿಕೆ ಇಟ್ಟುಕೊಂಡ ಪಕ್ಷ ಜೆಡಿಎಸ್ ಮೈತ್ರಿಸರ್ಕಾರದ 14 ತಿಂಗಳ ಆಡಳಿತದ ಕಷ್ಟ ನನಗೆ ಗೊತ್ತು, ಬಿಜೆಪಿ 10% ಸರ್ಕಾರ ಅಂತ ಸಿದ್ದರಾಮಯ್ಯ ಹೇಳ್ತಾರೆ, ಕಾಂಗ್ರೆಸ್ ಸಹ ಪರ್ಸೆಂಟೇಜ್ ಸರ್ಕಾರ ಅಂತ ಮೋದಿನು ಹೇಳ್ತಾರೆ ನನ್ನ ಬಗ್ಗೆ ಹಾಗೆ ಹೇಳಲು ಸಾಧ್ಯ ಇಲ್ಲ ಎಂದರು.
ನನ್ನ ಸರ್ಕಾರಕ್ಕೆ ಯಾವನಾದರೂ ಹಾಗೆ ಹೇಳಿದ್ದಾನಾ?. ಕೋವಿಡ್ ಕಾರಣ ಶಾಲೆಗಳು ನಡೆಯುತ್ತಿಲ್ಲ. ಆದರೂ ಖಾಸಗಿ ಶಾಲೆಗಳಿಂದ ಶುಲ್ಕ ವಸೂಲಿ ನಿಂತಿದೆಯಾ? ಎಂದು ಪ್ರಶ್ನಿಸಿದರು.