26/11ರ ಭಯೋತ್ಪಾದಕ ದಾಳಿಗೆ 12 ವರ್ಷ : ವಿನಾಶದ ವಿರುದ್ಧದ ಒಗ್ಗಟ್ಟನ್ನು ಶ್ಲಾಘಿಸಿದ ರತನ್ ಟಾಟಾ | Janata news
ಮುಂಬೈ : ಇಡಿ ರಾಷ್ಟ್ರವನ್ನು ಬೆಚ್ಚಿಬೀಳಿಸಿದ ಮತ್ತು ಭಾರತದ ದೃಷ್ಟಿಕೋನವನ್ನು ಬದಲಾಯಿಸಿದ 26/11ರ ಭಯೋತ್ಪಾದಕ ದಾಳಿಯ ಕರಾಳ ನೆನಪಿಗೆ ಇಂದು ಗುರುವಾರ 12 ವರ್ಷ ಕಳೆದಿದೆ. ದಾಳಿಯ ಕೇಂದ್ರಬಿಂದುವಾಗಿದ್ದ ಮುಂಬೈನ ಹೋಟೆಲ್ ತಾಜ್ ಪ್ಯಾಲೇಸ್ ಒಡೆತನದ ಕಂಪನಿಯ ಅಧ್ಯಕ್ಷರಾಗಿರುವ ರತನ್ ಟಾಟಾ, ದಾಳಿಯ 12 ವರ್ಷಗಳ ನಂತರ ದಾಳಿಕೋರರ ವಿರುದ್ಧ ಪ್ರದರ್ಶಿಸಿದ ಮುಂಬೈನ ಒಗ್ಗಟ್ಟನ್ನು ನಮಿಸುತ್ತಾ ತಮ್ಮ ಸಾಮಾಜಿಕ ಮದ್ಯಮದಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.
12 ವರ್ಷಗಳ ಹಿಂದೆ ಇಂದು ನಡೆದ ಅನಪೇಕ್ಷಿತ ವಿನಾಶವನ್ನು ಎಂದಿಗೂ ಮರೆಯಲಾಗುವುದಿಲ್ಲ. ಆದರೆ ಹೆಚ್ಚು ಸ್ಮರಣೀಯ ಸಂಗತಿಯೆಂದರೆ, ಮುಂಬೈ ವೈವಿಧ್ಯಮಯ ಜನರಾಗಿ, ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಆ ದಿನ ಭಯೋತ್ಪಾದನೆ ಮತ್ತು ವಿನಾಶವನ್ನು ನಿವಾರಿಸಲು ಒಗ್ಗೂಡಿರುವುದು. ಇಂದು, ನಾವು ಖಂಡಿತವಾಗಿಯೂ ನಾವು ಕಳೆದುಕೊಂಡವರನ್ನು ಶೋಕಿಸಬಹುದು ಮತ್ತು ಶತ್ರುಗಳನ್ನು ಗೆಲ್ಲಲು ಸಹಾಯ ಮಾಡಿದ ಧೈರ್ಯಶಾಲಿಗಳ ತ್ಯಾಗವನ್ನು ಗೌರವಿಸಬಹುದು, ಆದರೆ ನಾವು ಶ್ಲಾಘಿಸಬೇಕಾದದ್ದು ಏಕತೆ ಮತ್ತು ದಯೆಯ ಕಾರ್ಯಗಳು ಮತ್ತು ನಾವು ಪಾಲಿಸಬೇಕಾದ ಸೂಕ್ಷ್ಮತೆ ಮತ್ತು ಆಶಾದಾಯಕವಾಗಿ, ಇದು ಮುಂದಿನ ವರ್ಷಗಳಲ್ಲಿ ಹೊಳೆಯುತ್ತಲೇ ಇರುತ್ತದೆ, ಎಂದು ರತನ್ ಟಾಟಾ ತಮ್ಮ ಇನ್ಸ್ಟಾಗ್ರಾಂಖಾತೆ ಯಲ್ಲಿ ಪ್ರಕಟಿಸಿದ್ದಾರೆ.
ಹನ್ನೆರಡು ವರ್ಷಗಳ ಹಿಂದೆ, ಈ ದಿನಾಂಕದಂದು,ನಾಲ್ಕು ದಿನಗಳ ಕಾಲ ನಡೆದ ಅಮಾನವೀಯ ಭಯೋತ್ಪಾದಕ ದಾಳಿಗೆ ಮುಂಬೈ ಸಾಕ್ಷಿಯಾಯಿತು. ಪಾಕಿಸ್ತಾನದ 10 ಭಯೋತ್ಪಾದಕರು ಭಾರತದ ವಾಣಿಜ್ಯ ರಾಜಧಾನಿಯ, ಐದು ಪ್ರಮುಖ ಸ್ಥಳಗಳ, ಮೇಲೆ ಏಕಕಾಲದಲ್ಲಿ ನಡೆಸಿದ ದಾಳಿಯಲ್ಲಿ 166 ಜನರು ಸಾವನ್ನಪ್ಪಿದರು ಮತ್ತು 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಎರಡು ಐಷಾರಾಮಿ ಹೋಟೆಲ್ಗಳಾದ ಒಬೆರಾಯ್-ಟ್ರೈಡೆಂಟ್ ಹೋಟೆಲ್ ಮತ್ತು ತಾಜ್ ಮಹಲ್ ಪ್ಯಾಲೇಸ್ ಮತ್ತು ಟವರ್ ಹೋಟೆಲ್, ಯಹೂದಿ ಸಾಂಸ್ಕೃತಿಕ ಕೇಂದ್ರ - ನಾರಿಮನ್ ಪಾಯಿಂಟ್ನಲ್ಲಿರುವ ಚಬದ್ ಹೌಸ್, ಲಿಯೋಪೋಲ್ಡ್ ಕೆಫೆ ಮತ್ತು ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೆ ನಿಲ್ದಾಣ ಸೇರಿದಂತೆ ಅನೇಕ ಕಡೆ ಪಾಕಿಸ್ತಾನದ ಉಗ್ರರು ಗುಂಡಿನ ಗಾಳಿ ನಡೆಸಿದ್ದರು.