ಯಾರನ್ನೋ ಮಂತ್ರಿ ಮಾಡಬೇಡಿ ಎನ್ನುವ ಕೀಳು ಮಟ್ಟಕ್ಕೆ ಇಳಿದಿಲ್ಲ, ಚನ್ನಪಟ್ಟಣಕ್ಕೆ ನಾನೇ ಮಂತ್ರಿ - ನಾನೇ ಸರ್ಕಾರ! | Janata news
ಚನ್ನಪಟ್ಟಣ : ಯಾರನ್ನೋ ಸಚಿವರನ್ನಾಗಿ ಮಾಡುತ್ತಾರೆಂದು ನಾನು ಹೆದರುತ್ತೇನಾ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಪರೋಕ್ಷವಾಗಿ ಸಿಪಿ ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.
ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದ ಅವರು, ತಾಲೂಕಿನ ನುಣ್ಣೂರು ಗ್ರಾಮದಲ್ಲಿ ಬಡವರ ಭೂಮಿ ಕಬಳಿಸಲು ಹೋದವರು ಈಗ ಮಂತ್ರಿಯಾಗಲು ಹೊರಟ್ಟಿದ್ದಾರೆಂದು ಕಿಡಿಕಾರಿದರು. ಯಾರನ್ನೋ ಮಂತ್ರಿ ಮಾಡುತ್ತಾರೆಂದು ನಾನು ಹೆದರುತ್ತೇನಾ. ನಮ್ಮ ಕುಟುಂಬದಲ್ಲಿ ಬಹಳ ಜನರನ್ನ ನೋಡಿದ್ದೇವೆ.
ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರ್ಕಾರ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿಯಲ್ಲಿ ಯಾರನ್ನೋ ಮಂತ್ರಿ ಮಾಡಬೇಡಿ ಎಂದು ಹೇಳಿದ್ದೀನಂತೆ. ಯಾರನ್ನೋ ಮಂತ್ರಿ ಮಾಡಿದ್ರೆ ನಾನು ಹೆದರಿಕೊಳ್ಳುವವನಲ್ಲ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಇನ್ನು ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಸಿಎಂ ಅವರನ್ನು ಭೇಟಿ ಮಾಡಿದ್ದೇನೆ ಅಷ್ಟೇ, ಬೇರೆ ಯಾವ ಕಾರಣಕ್ಕೂ ಅಲ್ಲ. ಇಲ್ಲಿ 20 ಕೆರೆ ತುಂಬಿಸಿ ಭಗೀರಥ ಆದ್ರೂ, ಆದರೆ ನಾನು 128 ಕೆರೆ ತುಂಬಿಸಿದ್ದೇನೆ, ಆದರೆ ನಾನೇನು ಬೋರ್ಡ್ ಹಾಕಿಕೊಂಡಿಲ್ಲ ಎಂದರು.
ಇನ್ನು ನಾನು ಇಲ್ಲಿ ಇರುವವರೆಗೂ ಬಡವರರಿಗೆ ಅನ್ಯಾಯವಾಗಲೂ ಬಿಡಲ್ಲ, ಸಿಎಂ ಯಡಿಯೂರಪ್ಪನವರು ಈ ಜಿಲ್ಲೆಯಿಂದ ಇನ್ನು 4 ಜನರನ್ನ ಮಂತ್ರಿ ಮಾಡಲಿ ಹೆದರಿಸುವ ಶಕ್ತಿ ನನಗಿದೆ. ನನ್ನ ಬೆನ್ನಿಗೆ ಜನರಿದ್ದಾರೆ. ನಾನು ಯಾರನ್ನೋ ಮಂತ್ರಿ ಮಾಡಬೇಡಿ ಎನ್ನುವ ಕೀಳು ಮಟ್ಟಕ್ಕೆ ಇಳಿಯಲ್ಲ ಎಂದರು.
ಲಿಂಗಾಯತ ಸಮುದಾಯವನ್ನ ಒಬಿಸಿಗೆ ಸೇರಿಸುವ ವಿಚಾರವಾಗಿ ಈಗಿನ ರಾಜಕೀಯ ಪ್ರಸಂಗಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ಮೀಸಲಾತಿ, ಪ್ರಾಧಿಕಾರ ರಚನೆ ಮಾಡುವುದು ಅವರವರ ಇಚ್ಛೆ. ಅಧಿಕಾರ ನಡೆಸುವವರಿಗೆ ನಾನು ಸಲಹೆ ಕೊಡುತ್ತೇನೆ. ಪ್ರತಿ ಕುಟುಂಬಕ್ಕೂ ವಸತಿ, ಶಿಕ್ಷಣ, ಆರೋಗ್ಯ ಕಲ್ಪಿಸಬೇಕು. ಉದ್ಯೋಗ ಕಲ್ಪಿಸುವುದು ಸರ್ಕಾರದ ಕೆಲಸ ಎಂದು ಕುಮಾರಸ್ವಾಮಿ ಹೇಳಿದರು.