ಲವ್ ಜಿಹಾದ್ ಕಾಯ್ದೆ ತರುವಮೊದಲು ಯಾವ ನಾಯಕರ ಮಕ್ಕಳುಯಾರನ್ನು ಲವ್ ಮಾಡಿದ್ದಾರೆ ನೋಡಲಿ:ಡಿಕೆಶಿ | Janata news
ಉಡುಪಿ : ಲವ್ ಜಿಹಾದ್ ಕಾಯ್ದೆ ತರುವ ಮೊದಲು ಯಾವ ನಾಯಕರ ಮಕ್ಕಳು ಯಾರನ್ನು ಲವ್ ಮಾಡಿಕೊಂಡಿದ್ದಾರೆ, ಯಾರನ್ನು ಮದುವೆ ಮಾಡಿಕೊಂಡಿದ್ದಾರೆ ಎಂದು ನೋಡಲಿ. ಯಾವುದೇ ಪಕ್ಷವಿರಲಿ, ಭಾರತದಲ್ಲಿ ಧರ್ಮ, ಪ್ರೀತಿ ಅವರ ಹಕ್ಕು, ಇದರಲ್ಲಿ ನಮಗೆ ಹಸ್ತಕ್ಷೇಪ ಮಾಡಲು ಇಷ್ಟವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೊಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿರೋದು ಗಂಭೀರ ವಿಚಾರ. ನನಗೆ ಮಾಧ್ಯಮದವರು ಹಾಗೂ ಸ್ನೇಹಿತರುಗಳು ಎರಡು ಮೂರು ತಿಂಗಳ ಹಿಂದೆಯೇ ನೀಡಿದ್ದ ಮಾಹಿತಿಯನ್ನು ಜನರ ಮುಂದೆ ಇಟ್ಟಿದ್ದೇನೆ. ನಾನು ಯಾರ ಹೆಸರನ್ನೂ ಹೇಳಿಲ್ಲ. ಆದರೆ ಅವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರೋದೇಕೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ನನ್ನ ಬಳಿ ಸಾಕ್ಷಿ ಇದೆ. ನಾನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿಲ್ಲ. ಈ ಹಿಂದೆ ರಾಜಕೀಯ ಕಾರ್ಯದರ್ಶಿಯನ್ನು ವಜಾ ಮಾಡಿದ್ದರು, ಕೆಲ ದಿನಗಳ ಹಿಂದೆ ಮಾಧ್ಯಮ ಸಲಹೆಗಾರರು ರಾಜೀನಾಮೆ ನೀಡಿದ್ದಾರೆ. ಈಗ ಅವರ ಆಪ್ತ ಹಾಗೂ ಅವರ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂದರೆ ಅದು ಜವಾಬ್ದಾರಿಯುತ ಸ್ಥಾನ. ಅವರ ಹೆಸರು ಅನೇಕ ವಿಚಾರದಲ್ಲಿ ಕೇಳಿಬಂದಿವೆ. ಹೀಗಾಗಿ ನನಗೆ ಬಂದ ಮಾಹಿತಿ ತಿಳಿಸಿದ್ದೇನೆ ಎಂದರು.
ಈ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ನಡೆದರೆ, ಈ ವಿಡಿಯೋ ಇದೆಯೋ, ಇಲ್ಲವೋ, ಅವರನ್ನು ಬೆದರಿಸಲಾಗಿತ್ತೋ, ಇಲ್ಲವೋ ಎಂಬುದೆಲ್ಲ ಹೊರಗೆ ಬರುತ್ತದೆ. ಗೃಹ ಸಚಿವರು ಈ ಪ್ರಕರಣದ ತನಿಖೆ ನಡೆಸುವುದಾಗಿ ತಿಳಿಸಿರುವುದು ಸ್ವಾಗತಾರ್ಹ ಎಂದರು.
ನಾಳೆ ಹಿರಿಯ ಪಕ್ಷದ ನಾಯಕರ ಸಭೆ ಕರೆದಿದ್ದೇನೆ. ಸಚಿವ ಸಂಪುಟ ವಿಸ್ತರಣೆ ವಿಚಾರ, ರಾಜ್ಯ ಸಂಪುಟ ವಿಸ್ತರಣೆ, ಅವರ ಆಂತರಿಕ ವಿಚಾರ, ಕಾಂಗ್ರೆಸ್ ಪಕ್ಷಕ್ಕೂ ಬಿಜೆಪಿ ಇಂಟರ್ನಲ್ ವಿಷಯಕ್ಕೂ ಸಂಬಂಧ ಇಲ್ಲ ಎಂದು ಹೇಳಿದರು.
ಲವ್ ಜಿಹಾದ್ ಕಾನೂನು ತರುವ ಮೊದಲು ಕೇಂದ್ರದತ್ತ ಒಮ್ಮೆ ನೋಡಿ. ಯಾವ ಲೀಡರ್ ಮಕ್ಕಳು ಯರ್ಯಾರನ್ನು ಲವ್ ಮಾಡಿದ್ದಾರೆ ಎಂದು ತಿಳಿದುಕೊಳ್ಳಿ. ಬಿಜೆಪಿ ಇರಲಿ ಕಾಂಗ್ರೆಸ್ ಇರ್ಲಿ ಪಾರ್ಟಿ ಯಾವುದೇ ಇರಲಿ, ಭಾರತ ದೇಶದಲ್ಲಿ ಅವರ ಪ್ರೀತಿ ಅವರ ಹಕ್ಕು. ಧರ್ಮ, ವಿಶ್ವಾಸ, ಮಾನವೀಯತೆ ಎಲ್ಲವೂ ಗೌರವಿಸೋದು ಮುಖ್ಯ ಎಂದು ಡಿಕೆಶಿ ಸ್ಪಷ್ಟ ಪಡಿಸಿದರು.