ಹಿಂದೂ-ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದ ಸಾಕಷ್ಟು ಜನರಿದ್ದಾರೆ: ಸಿದ್ದರಾಮಯ್ಯ | Janata news
ಬೆಂಗಳೂರು : ದೇಶದಲ್ಲಿ 600 ವರ್ಷಗಳ ಕಾಲ ಆಳ್ವಿಕೆ ನಡೆಸಿದ ಮೊಗಲರ ಕಾಲದಲ್ಲಿ ಹಿಂದೂ-ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದವರು ಸಾಕಷ್ಟು ಜನರಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಲವ್ ಜಿಹಾದ್ ನಿಷೇಧಕ್ಕೆ ಕಾಯ್ದೆ ಜಾರಿ ಕುರಿತಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಲವ್ ಜಿಹಾದ್ ನಿಷೇಧಕ್ಕೆ ಕಾಯ್ದೆ ಜಾರಿ ಅಸಂವಿಧಾನಿಕ. ಕಾನೂನಿನಲ್ಲಿ ವಯಸ್ಕರಾದವರಿಗೆ ಯಾರನ್ನು ಬೇಕಾದರು ಮದುವೆಯಾಗುವ ಸ್ವಾತಂತ್ರ್ಯ ಇದೆ. ಆದರೆ ವಿವೇಕ ಇಲ್ಲದೆ ಲವ್ ಜಿಹಾದ್ ತಡೆ ಕಾಯ್ದೆ ಜಾರಿಗೆ ತರುತ್ತಿದ್ದಾರೆ ಎಂದು ಕಿಡಿಕಾರಿದರು.
ಹಸು ಮುದಿಯಾದಾಗ, ಗೊಡ್ಡಾದಾಗ ಏನು ಮಾಡಬೇಕು. RSSನವರು ಅದನ್ನು ಮನೆಗೆ ತೆಗೆದುಕೊಂಡು ಹೋಗ್ತಾರಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಹಾಲು, ಬೆಣ್ಣೆಯನ್ನು ತಿಂದವರು RSSನವರು. ರೈತರು ಮಾತ್ರ ಸಗಣಿ ಹೊತ್ತುಕೊಂಡೇ ಇರಬೇಕಾ? ಎಂದು ಪ್ರಶ್ನಿಸಿದರು.
ನಾನು ಸಗಣಿಯನ್ನೂ ಎತ್ತಿದ್ದೇನೆ, ಗಂಜಲ ಬಾಚಿದ್ದೇನೆ. ಇವರು ಯಾವತ್ತಾದ್ರೂ ಸಗಣಿಯನ್ನು ಎತ್ತಿದ್ದಾರಾ?ಗೋಪೂಜೆ ಅಂತಾರೆ, ಆದ್ರೆ ಅದಕ್ಕೆ ಹುಲ್ಲನ್ನ ಹಾಕಿದ್ದಾರಾ? ಹುಚ್ಚರ ಸಂತೆಯಲ್ಲಿ ಉಂಡವನೇ ಜಾಣ ಅನ್ನುವಂತಾಗಿದೆ ಎಂದು ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಲವ್ ಜಿಹಾದ್ ಕಾಯ್ದೆ ತರುತ್ತೇವೆಂಬುದು ಮೂರ್ಖತನ. ಇದೊಂದು ಮೂರ್ಖತನದ ಚಿಂತನೆ ಎಂದ ಸಿದ್ದರಾಮಯ್ಯ ಬಿಜೆಪಿಯವರು ಲವ್ ಜಿಹಾದ್ ಬಗ್ಗೆ ಮಾತನಾಡುತ್ತಾರೆ. ಹಿಂದೂ-ಮುಸ್ಲಿಮರು ಮದುವೆಯಾಗಬಾರದು ಅಂತಾರೆ. ಮುಸ್ಲಿಮರು 600 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದಾರೆ. ಆಗ ಸಾಕಷ್ಟು ಸಂಬಂಧಗಳು ಬೆಳೆದುಬಿಟ್ಟಿವೆ ಎಂದು ಹೇಳಿದರು.