ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕತ್ತು ಕೊಯ್ದ ಅಪ್ರಾಪ್ತ ಯುವಕ ಬಂಧನ: ಸ್ಫೋಟಕ ರಹಸ್ಯ! | Janata news
ಮಂಡ್ಯ : ಮದ್ದೂರು ತಾಲೂಕಿನ ಹುರುಗಲವಾಡಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕತ್ತು ಕೊಯ್ದು ಅಮಾನವೀಯತೆ ಮೆರೆದ ಓರ್ವ ಅಪ್ರಾಪ್ತ ಯುವಕನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.
ಕಬ್ಬು ಕಟಾವು ಮಾಡಲು ಹುರುಗಲವಾಡಿಗೆ ಬಂದಿದ್ದ ಬಳ್ಳಾರಿ ಜಿಲ್ಲೆಯ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ನಂತರ ಅದೇ ಕಬ್ಬಿನ ಗದ್ದೆಯಲ್ಲಿ ಅವಿತುಕೊಂಡಿದ್ದ ಅಪ್ರಾಪ್ತನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಮ್ಮ ಜತೆಯಲ್ಲೇ ಕಬ್ಬು ಕಟಾವು ಮಾಡುತ್ತಿದ್ದ 12 ವರ್ಷದ ಮಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗಿ ಕೆಲ ಕ್ಷಣಗಳಲ್ಲೇ ಮಗಳ ಚೀರಾಟ ಕೇಳಿ ಗಾಬರಿಯಿಂದ ಹೋಗಿ ನೋಡಿದರೆ, ಆ ಬಾಲಕಿ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದಳು.
ಅಲ್ಲೇ ಪಕ್ಕದಲ್ಲಿ ಅಡಗಿ ಕುಳಿತಿದ್ದ ಅವರು ಕೆಲಸ ಮಾಡುತ್ತಿದ್ದ ಸಮೀಪದ ಮನೆಯ 17 ವರ್ಷದ ಹುಡುಗ. ನೀನ್ ಏನ್ ಮಾಡ್ತಿದ್ದೀಯಾ? ಎಂದು ಕೇಳಿದಾಗ ಯಾರೋ ಇಬ್ಬರು ಬಾಲಕಿಯನ್ನು ಎಳೆದೊಯ್ಯುತ್ತಿದ್ದರು. ಬಿಡಿಸಲು ಹೋಗಲು ಭಯವಾಗಿ ಗದ್ದೆಯಲ್ಲಿ ಅವಿತು ಕುಳಿತಿದ್ದೆ ಎಂದು ಅಸ್ಪಷ್ಟ ಮಾಹಿತಿ ನೀಡುತ್ತಿದ್ದ. ಆತನ ಶರ್ಟ್ ಮೇಲೂ ರಕ್ತದ ಕಲೆಯಾಗಿತ್ತು.
ಕಬ್ಬಿನ ಗದ್ದೆಯಲ್ಲಿ ಬಾಲಕಿ ಭೀಕರ ಹತ್ಯೆಯಾಗಿರುವ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕೊಲೆ ನಡೆದ ಸ್ಥಳದಲ್ಲಿ ಅಪ್ರಾಪ್ತ ಬಾಲಕ ಅವಿತು ಕುಳಿತುಕೊಂಡಿದ್ದ ವಿಚಾರ ಗೊತ್ತಾಗಿ ಆತನನ್ನು ಕೊಪ್ಪ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈತನ ವರ್ತನೆ ಕಂಡು ಅನುಮಾನಗೊಂಡು ವಿಚಾರಿಸಿದಾಗ ಸತ್ಯ ತಿಳಿದಿದೆ. ವಿಚಾರಣೆ ವೇಳೆ ಆ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.