ಶೀಘ್ರ ರಾಜ್ಯದಲ್ಲಿ ಲವ್ ಜೆಹಾದ್ಗೆ ಕಠಿಣ ಕಾನೂನು ಜಾರಿ: ಸಚಿವ ಬಸವರಾಜ ಬೊಮ್ಮಾಯಿ | Janata news
ಉಡುಪಿ: : ಲವ್ ಜೆಹಾದ್ ಎಂಬುದು ಮತಾಂತರಕ್ಕೆ ಸುಲಭ ವಿಧಾನ ಎಂಬುದಾಗಿ ಅಲಹಾ ಬಾದ್ ಹೈಕೋರ್ಟ್ ತಿಳಿಸಿದೆ. ಈ ಆದೇಶದ ಅಧ್ಯ ಯನ ಮಾಡಿ ಶೀಘ್ರ ರಾಜ್ಯದಲ್ಲಿ ಲವ್ ಜೆಹಾದ್ ಕಾನೂನು ಜಾರಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಪ್ಪಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಉತ್ತರ ಪ್ರದೇಶ ಸರ್ಕಾರ ಈಚೆಗೆ ಲವ್ ಜಿಹಾದ್ ಕಾನೂನು ಜಾರಿ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿದ್ದು ಅದರ ಪ್ರತಿಯನ್ನು ಪಡೆದು ಪರಿಶೀಲಿಸಿ ಯಾವ ಅಂಶಗಳನ್ನು ಕಾನೂನಿನಲ್ಲಿ ಸೇರಿಸಬೇಕು ಎಂದು ಚರ್ಚಿಸಿ ನಿರ್ಧರಿಸಲಾಗುವುದು. ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಬಂದೇ ಬರುತ್ತದೆ ಎಂದು ಬೊಮ್ಮಾಯಿ ಸ್ಪಷ್ಟವಾಗಿ ಹೇಳಿದರು.
ಮೊಘಲರ ಕಾಲದಿಂದಲೂ ಲವ್ ಜಿಹಾದ್ ಇದೆ ಎಂದು ಹೇಳಿರುವ ಸಿದ್ದರಾಮಯ್ಯ ಇನ್ನೂ ಮೊಘಲರ ಕಾಲದಲ್ಲಿಯೇ ಇದ್ದಾರೆ ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.
ಮಂಗಳೂರಿನ ಗೋಡೆಗಳಲ್ಲಿ ಕಂಡು ಬಂದ ಉಗ್ರ ಬರಹವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಡಿಸಿಪಿಗಳ ನೇತೃತ್ವದಲ್ಲೇ ರಾತ್ರಿ ಗಸ್ತು ಹೆಚ್ಚಿಸಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಇರಾಕ್, ಇರಾನ್, ಈಜಿಪ್ಟ್ ಸಹಿತ ಭಾರತದ ಕಾಶ್ಮೀರದಲ್ಲಿ ಭಯೋತ್ಪಾದನೆ ಪ್ರಚೋದಿಸುವ ಸಂಸ್ಥೆಗಳು ಈ ರೀತಿ ಉಗ್ರ ಪರವಾದ ಬರಹವನ್ನು ಹಾಕುತ್ತವೆ. ಅದೇ ಮಾದರಿ ಪ್ರಯತ್ನ ಮಂಗಳೂರಿನಲ್ಲಿ ನಡೆದಿದ್ದು, ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ. ಇದರ ಹಿಂದಿರುವ ಕೃತ್ಯ ಬಯಲಿಗೆಳೆಯಲಾಗುವುದು ಎಂದರು.
ಮರಾಠ ಅಭಿವೃದ್ಧಿ ನಿಗಮಕ್ಕೆ ವಿರೋಧ ವ್ಯಕ್ತಪಡಿಸಿ ಡಿ. 5ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್ ಬಗ್ಗೆ ಮಾತನಾಡಿದ ಅವರು ಡಿ. 5ರಂದು ಬಂದ್ ಇಲ್ಲ. ಬಂದ್ ಮಾಡಿದರೆ ಕೋರ್ಟ್ ಆದೇಶ ಉಲ್ಲಂಘನೆ ಮಾಡಿದಂತಾಗುತ್ತದೆ. ಬಂದ್ ಮಾಡಬಾರದೆಂದು ಸಂಬಂಧಪಟ್ಟವರಿಗೆ ಮನವಿ ಮಾಡಿದ್ದೇವೆ. ಆ ದಿನ ಟೋಲ್ಗಳಲ್ಲಿಯೂ ಭದ್ರತೆ ನಿಯೋಜನೆ ಮಾಡಲಿದ್ದೇವೆ ಎಂದರು.