ಪುತ್ರನ ನಿಶ್ಚಿತಾರ್ಥದ ವೇಳೆ ಲಿಫ್ಟ್ ಗುಂಡಿಯಲ್ಲಿ ಬಿದ್ದು ವರನ ತಂದೆ ಸಾವು! | Janata news
ದೊಡ್ಡಬಳ್ಳಾಪುರ : ಹೋಟೆಲ್ ನಲ್ಲಿ ಮಗನ ಮದುವೆ ನಿಶ್ಚಿತಾರ್ಥ ಸಮಾರಂಭದಲ್ಲಿದ್ದ ತಂದೆ ಆಯ ತಪ್ಪಿ ಹೋಟೆಲ್ ನ ಲಿಫ್ಟ್ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಮೃದ್ಧಿ ಗ್ರ್ಯಾಂಡ್ ಹೊಟೇಲ್ ನಲ್ಲಿ ನಡೆದಿದೆ.
ಬೆಂಗಳೂರು ದಕ್ಷಿಣ ತಾಲೂಕು ಎಲೇಕೊಡಿಗೇನಹಳ್ಳಿ ನಿವಾಸಿ ಮಂಜುನಾಥ್ (60) ಮೃತಪಟ್ಟವರು.ಅವರ ಪುತ್ರ ದರ್ಶನ್ ಅವರ ಮದುವೆ ದೊಡ್ಡಬಳ್ಳಾಪುರದ ಕಂಟನಕುಂಟೆಯ ಶಿಲ್ಪಾ ಎಂಬುವವರ ಜೊತೆ ನಿಶ್ಚಯವಾಗಿತ್ತು.
ದೊಡ್ಡಬಳ್ಳಾಪುರ ನಗರದ ಸಮೃದ್ಧಿ ಗ್ರ್ಯಾಂಡ್ ಹೋಟೆಲ್ನಲ್ಲಿ ನಿಶ್ಚಿತಾರ್ಥ ನಡೆಯುತ್ತಿತ್ತು. ಆದರೆ ಈ ಹೋಟೆಲ್ನಲ್ಲಿ ಲಿಫ್ಟ್ ಅಳವಡಿಕೆಗೆಂದು ಗುಂಡಿಯನ್ನು ಹಾಗೇ ಬಿಡಲಾಗಿತ್ತು. ಅದನ್ನು ಮುಚ್ಚಿ ಕೂಡ ಇಟ್ಟಿರಲಿಲ್ಲ. ಕುಟುಂಬಸ್ಥರು, ಸಂಬಂಧಿಕರೊಂದಿಗೆ ಮೂರನೇ ಮಹಡಿಯಲ್ಲಿ ಸಂತೋಷದಿಂದ ಓಡಾಡುತ್ತಿದ್ದ ಮಂಜುನಾಥ್, ಆಯತಪ್ಪಿ ಗುಂಡಿಯಲ್ಲಿ ಬಿದ್ದಿದ್ದಾರೆ. ಇದರಿಂದಾಗಿ ಅವರ ತಲೆಗೆ ಗಂಭೀರ ಗಾಯವಾಗಿತ್ತು.
ಗಾಯಾಳುವನ್ನು ಬೆಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ದೊಡ್ಡಬಳ್ಳಾಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.