ನೂತನ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಿಲಾನ್ಯಾಸ | Janata news
ನವದೆಹಲಿ: : ದೆಹಲಿಯಲ್ಲಿ 971 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಂಸತ್ ಭವನದ ಕಟ್ಟಡಕ್ಕೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭೂಮಿ ಪೂಜೆ ಮಾಡಿ, ಶಿಲಾನ್ಯಾಸ ನೆರವೇರಿಸಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಸೇರಿದಂತೆ ನಾನಾ ರಾಜಕೀಯ ಪಕ್ಷಗಳ ನಾಯಕರು, ಸಚಿವರು, ವಿವಿಧ ದೇಶಗಳ ರಾಯಭಾರಿಗಳು, ರತನ್ ಟಾಟಾ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಸಾಕ್ಷಿಯಾದರು.
ದೆಹಲಿಯಲ್ಲಿ ಹೊಸ ಸಂಸತ್ ಭವನ ಕಟ್ಟಡಕ್ಕೆ ಶಿಲಾನ್ಯಾಸ ನಡೆಸಿದ ನಂತರ ಮಾತನಾಡಿದ ಮೋದಿ, ಇಂದು ನಾವು ನೂತನ ಸಂಸತ್ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದೇವೆ. ಈ ಐತಿಹಾಸಿಕ ದಿನಕ್ಕೆ 130 ಕೋಟಿ ಜನರು ಸಾಕ್ಷಿಯಾಗಿದ್ದಾರೆ. ಅವಶ್ಯಕತೆಗೆ ಅನುಗುಣವಾಗಿ ನಾವು ಈ ಬದಲಾವಣೆ ಮಾಡುತ್ತಿದ್ದೇವೆ ಎಂದರು.
ಬಸವಣ್ಣನವರ ಅನುಭವ ಮಂಟಪದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, 12ನೇ ಶತಮಾನದಲ್ಲಿ ಅನುಭವ ಮಂಟಪ ಅಸ್ತಿತ್ವದಲ್ಲಿತ್ತು. ಅನುಭವ ಮಂಟಪ ನಾಡಿನ ಅಭಿವೃದ್ಧಿ ಮತ್ತು ಉನ್ನತಿಗೆ ಕೆಲಸ ಮಾಡಿತ್ತು ಎಂದು ಕೊಂಡಾಡಿದರು. ಬಸವಣ್ಣನವರ ಮಾತನ್ನು ಮೋದಿ ಕನ್ನಡದಲ್ಲೇ ಹೇಳಿದ್ದು ವಿಶೇಷವಾಗಿತ್ತು.
ದೆಹಲಿಯ ಸಂಸತ್ತು ಭವನ ಆವರಣದಲ್ಲಿಯೇ ನೂತನ ಸಂಸತ್ತು ಭವನ ತಲೆಯೆತ್ತಲಿದ್ದು, 2022ರ ವೇಳೆಗೆ ನಿರ್ಮಾಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಕರ್ನಾಟಕದ ಶೃಂಗೇರಿ ಮಠದ ಅರ್ಚಕರ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿತು. ನಂತರ ಅಂತರ ಧರ್ಮ ಪ್ರಾರ್ಥನೆಯ ಧ್ಯೋತಕವಾಗಿ ಸರ್ವಧರ್ಮ ಪ್ರಾರ್ಥನೆ ನೆರವೇರಿತು.