ಬಾಕಿ ವೇತನಕ್ಕೆ ಆಗ್ರಹಿಸಿ ಐಫೋನ್ ಉತ್ಪಾದನಾ ಘಟಕದಲ್ಲಿ ನೌಕರರಿಂದಲೇ ದಾಂಧಲೆ: ಕಚೇರಿ ಮೇಲೆ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ | Janata news
ಬೆಂಗಳೂರು : ಬೆಂಗಳೂರು ಬಳಿಯ ನರಸಾಪುರದಲ್ಲಿರುವ (ಕೋಲಾರ ಜಿಲ್ಲೆಯ) ತೈವಾನ್ ಮೂಲದ ಐಫೋನ್ ಘಟಕದಲ್ಲಿ ಸರಿಯಾಗಿ ವೇತನ ನೀಡುತ್ತಿಲ್ಲ ಎಂಬ ಕಾರಣಕ್ಕೆ ರೊಚ್ಚಿಗೆದ್ದ ಉದ್ಯೋಗಿಗಳು ಐ-ಫೋನ್ ಉತ್ಪಾದನಾ ಘಟಕದಲ್ಲಿ ದಾಂದಲೆ ನಡೆಸಿದ್ದಾರೆ.
ಕೋಲಾರದ ನರಸಾಪುರದ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಕಂಪನಿ ತನ್ನ ಕಾರ್ಮಿಕರಿಗೆ ಸರಿಯಾದ ವೇತನ ನೀಡದೇ ವಂಚಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೆಚ್ಚು ಹೊತ್ತು ದುಡಿಸಿಕೊಂಡು ಕಡಿಮೆ ಸಂಬಳ ನೀಡಲಾಗುತ್ತಿದೆ. ಕಳೆದ ನಾಲ್ಕು ತಿಂಗಳಿಂದ ಸರಿಯಾಗಿ ವೇತನ ನೀಡಿಲ್ಲ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗ್ಗೆ 4 ಗಂಟೆಯಿಂದಲೇ ಕಾರ್ಮಿಕರು ಇಲ್ಲಿ ಮುಷ್ಕರ ಪ್ರಾರಂಭಿಸಿದ್ದರು.
ಇದೀಗ ಪ್ರತಿಭಟನೆ ಉಗ್ರ ಸ್ವರೂಪ ತಾಳಿದ್ದು, ಬಾಕಿ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಂತ ನೌಕರರು ವಿಸ್ಟ್ರಾನ್ ಕಂಪನಿಯ ಕಚೇರಿಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ನೂರಾರು ಸಂಖ್ಯೆಯಲ್ಲಿ ಐ-ಫೋನ್ ಉತ್ಪಾದನಾ ಘಟಕಕ್ಕೆ ನುಗ್ಗಿದ ಜನರು ಅಲ್ಲಿನ ಪೀಠೋಪಕರಣಗಳು ಸೇರಿದಂತೆ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಹಾಳು ಮಾಡಿದ್ದಾರೆ. ಭಾರೀ ಪ್ರಮಾಣದಲ್ಲಿ ಗ್ಲಾಸ್ಗಳನ್ನೆಲ್ಲಾ ಪುಡಿ ಮಾಡಲಾಗಿದೆ. ಜೊತೆಗೆ ಕಾರುಗಳನ್ನು ಕೂಡ ಜಖಂಗೊಳಿಸಲಾಗಿದೆ.
ಕಂಪನಿ ನಮಗೆ ನಾಲ್ಕು ತಿಂಗಳಿಂದ ವೇತನ ಕೊಟ್ಟಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದರೆ. ಹಾಗಾಗಿ, ಆಕ್ರೋಶಗೊಂಡ ಕಾರ್ಮಿಕರಿಂದ ಕಚೇರಿಯ ಮೇಲೆ ದಾಳಿ ಮತ್ತು ಕಲ್ಲು ತೂರಾಟ ನಡೆದಿದೆ ಎಂದು ಹೇಳಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ವೇಮಗಲ್ ಪೊಲೀಸರು ಪರಿಶೀಲನೆ ನಡೆಸಿದರು.
ಸುಮಾರು 11,000 ಕಾರ್ಮಿಕರು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿಯ ಪಾಳಿಗೆ ಬಂದಂತಹ ಸಾವಿರಾರು ಕಾರ್ಮಿಕರು ಈ ಕೃತ್ಯವೆಸಗಿದ್ದು, ಕಂಪನಿಯ ಗಾಜಿನ ಆವರಣಗಳನ್ನು ಒಡೆದು ಹಾಕಿದ್ದಲ್ಲದೆ ಕಂಪನಿಯಲ್ಲಿದ್ದ ಬೆಲೆಬಾಳುವ ಲ್ಯಾಪ್ ಟಾಪ್, ಐಪೋನ್ ಪೋನ್ ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಕಂಪನಿ ಮೂಲಗಳು ತಿಳಿಸಿವೆ.
ಪರಿಸ್ಥಿತಿ ಕೈ ಮೀರಿದ ಕಾರಣ ಸ್ಥಳಕ್ಕಾಗಮಿಸಿದ ವೇಮಗಲ್ ಪೊಲೀಸ್ ಠಾಣೆಯ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಉದ್ರಿಕ್ತ ನೌಕರರನ್ನು ಅಲ್ಲಿಂದ ಚದುರಿಸಿದ್ದಾರೆ.