ಸಚಿವ ಲಕ್ಷ್ಮಣ ಸವದಿ ಲಿಖಿತ ಭರವಸೆ ತಲುಪಿಸುವವರೆಗೂ ಮುಷ್ಕರ ಹಿಂಪಡೆಯಲ್ಲ: ಕೋಡಿಹಳ್ಳಿ ಚಂದ್ರಶೇಖರ್ | Janata news
ಬೆಂಗಳೂರು : ಸಚಿವರು ಬರುವವರೆಗೂ ಮುಷ್ಕರ ವಾಪಸ್ ಪಡೆಯುವುದಿಲ್ಲ ಎಂದು ಫ್ರೀಡಂ ಪಾರ್ಕ್ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಸಚಿವ ಲಕ್ಷ್ಮಣ ಸವದಿ ಇಲ್ಲಿಗೆ ಬಂದು ನಿನ್ನೆ ಕೊಟ್ಟ ಭರವಸೆಗಳ ಈಡೇರಿಕೆ ಬಗ್ಗೆ ಲಿಖಿತ ರೂಪದಲ್ಲಿ ಆಶ್ವಾಸನೆ ನೀಡಬೇಕು ಎಂದು ಕೋಡಿಹಳ್ಳಿ ಹೇಳಿದರು.
ಸಾರಿಗೆ ನೌಕರರು ಮುಂದಿಟ್ಟಿದ್ದ 10 ಬೇಡಿಕೆಗಳ ಪೈಕಿ ಸರ್ಕಾರ ಒಂಬತ್ತನ್ನ ಈಡೇರಿಸಲು ಒಪ್ಪಿದೆ. ಆದರೆ, ಇದು ಬಾಯಿ ಮಾತಿನದ್ದಾಗದೆ ಲಿಖಿತ ರೂಪದಲ್ಲಿರಲಿ. ಸರ್ಕಾರದ ಕಡೆಯಿಂದ ಒಬ್ಬ ಸಚಿವರ ಮೂಲಕ ಈ ಲಿಖಿತ ಭರವಸೆಯನ್ನು ಈ ಸ್ಥಳಕ್ಕೆ ಬಂದು ತಲುಪಲಿ. ಆ ನಂತರ ನಾವು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಫ್ರೀಡಂ ಪಾರ್ಕ್ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಆರನೇ ವೇತನ ಪರಿಷ್ಕರಣೆ ಮಾಡುವ ನಿರ್ಧಾರದಲ್ಲಿ ಇನ್ನೂ ಗೊಂದಲ ಇದೆ. ಆರನೇ ವೇತನ ಆಯೋಗದ ಪ್ರಕಾರ ವೇತನ ಯಾವಾಗಿನಿಂದ ಕೊಡುತ್ತೀರಾ? ಸರ್ಕಾರ ನಮಗೆ ಸ್ಪಷ್ಟತೆ ಕೊಡಲಿ.
ಅಡ್ಡಗೋಡೆ ಮೇಲೆ ದೀಪವಿಡುವ ಕೆಲಸ ಮಾಡಬೇಡಿ. ಸಾರಿಗೆ ಸಚಿವರೇ ನೀವು ನಿನ್ನೆ ಹೇಳಿದ್ದನ್ನ ಲಿಖಿತ ರೂಪದಲ್ಲಿ ಕೊಡಿ. ನಮಗೆ ಸಾರ್ವಜನಿಕರ ಹಾಗೂ ಕಾರ್ಮಿಕರ ಹಿತವೂ ಮುಖ್ಯ. ಈ ವಿಚಾರದಲ್ಲಿ ನಮಗೆ ಸ್ಪಷ್ಟತೆಯನ್ನ ನೀಡಬೇಕು ಎಂದು ಚಂದ್ರು ಹೇಳಿದರು. 6ನೇ ವೇತನ ಜಾರಿಯಾಗಿದೆ ಎಂಬ ಆದೇಶ ಪ್ರತಿ ಬೇಕಾಗಿದೆ. ಆದೇಶ ಪ್ರತಿ ಯಾವಾಗ ಕೊಡುತ್ತೀರಾ? ಎಂದು ತಿಳಿಸಬೇಕು ಎಂದು ಚಂದ್ರು ಪ್ರಶ್ನಿಸಿದರು.