ರಾಜಧಾನಿಯಲ್ಲಿ ಮತ್ತೆ ಪ್ರತಿಭಟನೆಯ ಬಿಸಿ: ಖಾಸಗಿ ಶಾಲಾ ಶಿಕ್ಷಕರ ಧರಣಿ! | Janata news
ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಖಾಸಗಿ ಶಾಲಾ ಶಿಕ್ಷಕರು ಹೋರಾಟ ನಡೆಸಿದ್ದಾರೆ.
ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಬೆಂಗಳೂರಿನ ಮೌರ್ಯ ಸರ್ಕಲ್ ನಿಂದ ಫ್ರೀಡಂ ಪಾರ್ಕ್ಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು ಜಾಥಾ ನಡೆಸಿದ್ದಾರೆ. ಕೆಲಸ ಕಳೆದುಕೊಂಡ ಶಿಕ್ಷಕರು ತರಕಾರಿ ಮಾರಾಟ, ಡ್ರೈವರ್ ಕೆಲಸ ಮಾಡುವಂತಾಗಿದೆ ಎಂದು ಅದೇ ಪೋಷಾಕಿನಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಶಿಕ್ಷಕರನ್ನೂ ಕೊರೊನಾ ಯೋಧರು ಎಂದು ಪರಿಗಣಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಶೇಷ ಅನುದಾನ ನೀಡಬೇಕು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವಿಮಾ ಸೌಲಭ್ಯ ಒದಗಿಸಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಖಾಸಗಿ ಶಾಲಾ ಶಿಕ್ಷಕರು ಸರ್ಕಾರದ ಮುಂದಿಟ್ಟಿದ್ದಾರೆ.
ಹಲವು ಪೋಷಕರು ಶಾಲಾ ಶುಲ್ಕಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ. ಅಂಥವರಿಗೆ ಶೀಘ್ರ ಬಾಕಿ ಶುಲ್ಕ ಪಾವತಿಸುವ ಕುರಿತು ಆದೇಶ ಹೊರಡಿಸಬೇಕು. ಶಾಲಾ ಸಿಬ್ಬಂದಿಗೆ ಮೊದಲ ಹಂತದಲ್ಲಿಯೇ ಆದ್ಯತೆ ಮೇಲೆ ಕೊರೊನಾ ಲಸಿಕೆ ವಿತರಿಸಬೇಕು ಎಂದು ಒತ್ತಾಯಿಸಿದ್ದಾರೆ.