ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿಯೇ ಗೂಂಡಾಗಿರಿ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ: ಸಚಿವ ಎಸ್ ಟಿ ಸೋಮಶೇಖರ್ | Janata news
ಮೈಸೂರು : ವಿಧಾನ ಪರಿಷತ್ ಸಭಾಪತಿಗಳ ಖುರ್ಚಿಗೆ ಅದರದ್ದೇ ಆದ ಗೌರವವಿದೆ. ಇದು ಕಾಂಗ್ರೆಸ್ ನವರ ಪೂರ್ವನಿಯೋಜಿತ ಸಂಚು ಎನಿಸುತ್ತದೆ, ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿಯೇ ಗೂಂಡಾಗಿರಿ ಮಾಡುವ ಹಾಗೂ ದಾಂಧಲೆ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ ಎಂದರು.
ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮೊದಲ ಬಾರಿ ಎಂಎಲ್ಸಿ ಆದವರೂ ಸಹ ಆ ಖುರ್ಚಿಯಲ್ಲಿ ಕೂರುತ್ತಾರೆಂದರೆ ಏನರ್ಥ? ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಪ್ರಶ್ನಿಸಿದರು.
ಸಭಾಪತಿಗಳ ಮೇಲೆ ಅವಿಶ್ವಾಸ ನಿರ್ಣಯವನ್ನು ನಮ್ಮ ಪಕ್ಷದ ಸದಸ್ಯರು ಮಂಡಿಸಿದ್ದು ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲವೇ? ಎಲ್ಲರಿಗೂ ನೀತಿ, ಕಾನೂನು ಹೇಳುವ ಅವರು ತಮ್ಮ ಪಕ್ಷದ ನಾಯರಿಗೆ ಬುದ್ಧಿ ಹೇಳಲಿ, ಗೂಂಡಾಗಿರಿ ಮಾಡಿದವರನ್ನು ಅಮಾನತು ಮಾಡಲಿ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಗೌರವಾನ್ವಿತ ಹಿರಿಯ ಸದಸ್ಯರೂ ಉಪ ಸಭಾಪತಿಗಳಾದ ಧರ್ಮೇಗೌಡರನ್ನು ಎಳೆದಾಡಿ ಗೂಂಡಾಗಿರಿ ಮಾಡಿದ ಹಾಗೆ ಬಲತ್ಕಾರವಾಗಿ ಕುರ್ಚಿಯಿಂದ ಎಳೆದಾಡಿದ್ದು ಖಂಡನೀಯ. ಇದು ಕಾಂಗ್ರೆಸ್ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ನವರಿಗೆ ಮರ್ಯಾದೆ ಉಳಿಸಿಕೊಳ್ಳಬೇಕೆಂದಿದ್ದರೆ ಹೀಗೆ ಗೂಂಡಾಗಿರಿ ಮಾಡಿದವರನ್ನು ಪಕ್ಷದಿಂದ ಅಮಾನತು ಮಾಡಬೇಕು. ಚಿಂತಕರ, ಬುದ್ದಿವಂತರ ಚಾವಡಿ ಎಂದೇ ಹೆಸರಾಗಿದ್ದ ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಇಂತಹ ಕೀಳುಮಟ್ಟದ ರಾಜಕೀಯಕ್ಕೆ ಇಳಿಯುತ್ತದೆ ಎಂದರೆ ಹೇಗೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಇದು ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಕಾಂಗ್ರೆಸ್ ವರ್ತನೆ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಿದ್ದೇವೆ ಎಂದು ಸಚಿವರಾದ ಸೋಮಶೇಖರ್ ಹೇಳಿದರು.