ಸಾವಿರಾರು ಹಾವುಗಳನ್ನು ರಕ್ಷಿಸಿದ ಸ್ನೇಕ್ ಡ್ಯಾನಿಯಲ್ ಹಾವು ಕಚ್ಚಿ ಸಾವು! | Janata news
ಬಾಗಲಕೋಟೆ : ನಗರದ ಖ್ಯಾತ ಉರಗ ಪ್ರೇಮಿ, ಜಲಚರ ಪ್ರಾಣಿಗಳ ರಕ್ಷಕ ಡ್ಯಾನಿಯಲ್ ನ್ಯೂಟನ್ (43) ಹಾವು ಕಡಿತದಿಂದಲೇ ಮೃತಪಟ್ಟಿದ್ದಾರೆ.
ಬಾಗಲಕೋಟೆಯ ಜಯನಗರದ ನಿವಾಸಿ ಡ್ಯಾನಿಯಲ್ ನ್ಯೂಟನ್ (43) ನಾಗರ ಹಾವು ಕಚ್ಚಿದ ಪರಿಣಾಮ ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಕೂಡಲೇ ಡ್ಯಾನಿಯಲ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕಳೆದ ಒಂದು ತಿಂಗಳ ಹಿಂದಷ್ಟೇ ಡ್ಯಾನಿಯಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಎನ್ನಲಾಗಿದೆ.
ತಾಲೂಕಿನ ಶಿಗಿಕೇರಿ ಕ್ರಾಸ್ ಬಳಿಯ ಕೆಎಚ್ಬಿ ಕಾಲೋನಿ ಮನೆಯೊಂದರಲ್ಲಿ ಹಾವು ಬಂದಿದೆ ಎಂದು ಕರೆ ಬಂದಾಗ ಕೂಡಲೇ ಅಲ್ಲಿಗೆ ಧಾವಿಸಿದ್ದ ಡ್ಯಾನಿಯಲ್ ನಾಗರಹಾವು ಹಿಡಿದಿದ್ದರು. ಬಳಿಕ ಅದನ್ನು ಕಾಡಿಗೆ ಬಿಡಲೆಂದು ಚೀಲದಲ್ಲಿ ಹಾಕುವ ವೇಳೆ ಹಾವು ಕಚ್ಚಿದ್ದರಿಂದ ಕೂಡಲೇ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಅಸುನೀಗಿದ್ದಾರೆ.
ಡ್ಯಾನಿಯಲ್ ಈವರೆಗೆ 3279 ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದು, ಅದರಲ್ಲಿ 1026 ನಾಗರ ಹಾವುಗಳಿದ್ದವು. ಹಾವು ಹಿಡಿಯುವ ವೇಳೆ ಒಟ್ಟು 74 ಬಾರಿ ಅವರಿಗೆ ವಿವಿಧ ಜಾತಿಯ ಹಾವುಗಳು ಕಚ್ಚಿದ್ದವು ಎನ್ನಲಾಗಿದೆ.
ಕಳೆದ ಜೂನ್ ತಿಂಗಳಲ್ಲಿ ನಾಗರ ಹಾವಿನ ಮರಿ ಕಚ್ಚಿದ ಪರಿಣಾಮ ಡ್ಯಾನಿಯಲ್ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಸಾವು ಗೆದ್ದು ಬಂದಿದ್ದರು.
ಒಟ್ಟಿನಲ್ಲಿ ಬಾಗಲಕೋಟೆ ಉರಗ ತಜ್ಞ ಡ್ಯಾನಿಯಲ್ ನ್ಯೂಟನ್ ಹಾವು ರಕ್ಷಣೆಯ ಕಾರ್ಯದಲ್ಲಿ ಹಾವಿನಿಂದಲೇ ಇಹಲೋಕ ತ್ಯಜಿಸಿದ್ದು ನೋವಿನ ಸಂಗತಿಯಾಗಿದ್ದು, ಡ್ಯಾನಿಯಲ್ ನ್ಯೂಟನ್ ದೇಹ ದಾನದ ಮೂಲಕ ಸಾವಿನಲ್ಲೂ ಮಾನವೀಯತೆ, ಸಾರ್ಥಕತೆ ಮೆರೆದಿದ್ದಾರೆ.