ಮತಗಟ್ಟೆ ಎದುರು ವಾಮಾಚಾರದ, ಬೆಚ್ಚಿಬಿದ್ದ ಗ್ರಾಮಸ್ಥರು | Janata news
ಬಾಗಲಕೋಟೆ : ಗ್ರಾಮ ಪಂಚಾಯ್ತಿ ಚುನಾವಣೆ ಮೊದಲ ಹಂತದ ಮತದಾನಕ್ಕೆ ಕೇವಲ ಎರಡು ದಿನಗಳು ಬಾಕಿ ಇರುವಾಗ ರಬಕವಿ-ಬನಹಟ್ಟಿ ತಾಲೂಕಿನ ಸಸಾಲಟ್ಟಿ ಗ್ರಾಮದಲ್ಲಿ ರಾತ್ರೋರಾತ್ರಿ ಕಿಡಿಗೇಡಿಗಳು ವಾಮಾಚಾರ ಮಾಡಿದ್ದು, ಇದನ್ನ ಕಂಡ ಗ್ರಾಮಸ್ಥರು ಬೆಳ್ಳಂಬೆಳಗ್ಗೆ ಬೆಚ್ಚಿಬಿದ್ದಿದ್ದಾರೆ.
ಭಾನುವಾರ ನಸುಕಿನಲ್ಲಿ ಮತದಾನ ನಡೆಯಲಿರುವ ಶಾಲೆಯ ಆವರಣ ಸೇರಿದಂತೆ ಗ್ರಾಮದ ಹಲವು ಕಡೆ ವಾಮಾಚಾರದ ಕುರುಹುಗಳು ಕಂಡಿದ್ದು, ಗೊಂಬೆ, ನಿಂಬೆಹಣ್ಣು, ಗುಲಾಲ್ ಹಾಕಿ ರಸ್ತೆ ಮಧ್ಯೆ ಒಡೆದ ಕುಂಬಳಕಾಯಿ ಇಟ್ಟು ಹೋಗಿರುವುದು ಕಂಡು ಬಂದಿದೆ.
ಸಸಾಲಟ್ಟಿ ಪಂಚಾಯಿತಿಗೆ ಡಿ.22ರಂದು ಚುನಾವಣೆ ನಡೆಯಲಿದೆ. ಈ ಪಂಚಾಯಿತಿಯಲ್ಲಿ 6 ವಾರ್ಡಿನ 21 ಸ್ಥಾನಕ್ಕೆ 62 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಿದ್ದಾಜಿದ್ದಿನ ಕಣವಾಗಿರುವ ಸಸಾಲಟ್ಟಿಯಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಮತಗಟ್ಟೆ 48, 50 ರ ಮುಂಭಾಗ ವಾಮಾಚಾರದ ಕುರುಹು ಪತ್ತೆಯಾಗಿದ್ದು, ವಾಮಾಚಾರ ಮಾಡಿ ಇಡಲಾಗಿದ್ದ ವಸ್ತುಗಳನ್ನು ತೆಗೆದು ನೋಡಿದಾಗ ಅದರಲ್ಲಿ ಅಭ್ಯರ್ಥಿಯೊಬ್ಬರ ಹೆಸರು ಬರೆದಿರುವುದು ಕಂಡು ಬಂದಿದೆ ಎನ್ನಲಾಗಿದೆ.