ಅಪ್ರಾಪ್ತ ಬಾಲಕಿಯ ಮದುವೆಯಾಗಿ ಕೊಂದು ಮನೆಯಲ್ಲೇ ಹೂತಿಟ್ಟ ಪತಿ! | Janata news
ತುಮಕೂರು : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗಿ, ಬಳಿಕ ಪಾಪಿ ಪತಿರಾಯ ಆಕೆಯನ್ನು ಹತ್ಯೆಗೈದು ಮನೆಯಲ್ಲಿ ಹೂತಿಟ್ಟಿದ್ದ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಹೊಸ ಇಟಕಲೋಟಿ ಗ್ರಾಮದಲ್ಲಿ ನಡೆದಿದೆ.
ನರಸಿಂಹಮೂರ್ತಿ ನನ್ನ ಪತ್ನಿ ಕಾಣೆಯಾಗಿದ್ದಾಳೆ, ಹುಡುಕಿಕೊಡಿ ಎಂದು 15 ದಿನಗಳ ಹಿಂದೆ ಖುದ್ದಾಗಿ ಗಂಡನೇ ದೂರು ದಾಖಲಿಸಿದ್ದ.
ಗಾರೆ ಕೆಲಸ ಮಾಡಿಕೊಂಡಿದ್ದ ನರಸಿಂಹಮೂರ್ತಿ, 9 ತಿಂಗಳ ಹಿಂದೆ ಅಂದ್ರೆ ಏಪ್ರಿಲ್ನಲ್ಲಿ 16 ವರ್ಷದ ಅಪ್ರಾಪ್ತೆ, ಸ್ವಂತ ಅಕ್ಕನ ಮಗಳನ್ನೇ ಓಡಿಸಿಕೊಂಡು ಹೋಗಿ ವಿವಾಹವಾಗಿದ್ದ.
15 ದಿನಗಳ ಹಿಂದೆ ಪತ್ನಿ ಹತ್ಯೆಗೈದು ಮನೆಯಲ್ಲಿ ಹೂತಿಟ್ಟು ಕಳೆದ 5 ದಿನಗಳಿಂದ ನರಸಿಂಹಮೂರ್ತಿ ನಾಪತ್ತೆಯಾಗಿದ್ದಾನೆ. ನರಸಿಂಹಮೂರ್ತಿ ಮೇಲೆಯೇ ಅನುಮಾನಗೊಂಡ ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದಾಗ ಆಕೆ ಶವ ಪತ್ತೆಯಾಗಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಗ್ರಾಮಕ್ಕೆ ಎಸಿ ಸೋಮಪ್ಪ ಖಡಕೋಳ ಹಾಗೂ ತಹಶೀಲ್ದಾರ್ ವಿಶ್ವನಾಥ, ಮಧುಗಿರಿ DySP ಪ್ರವೀಣ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆರೋಪಿ ನರಸಿಂಹಮೂರ್ತಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.