ಸಂಕ್ರಾಂತಿ ವೇಳೆ ಸಂಪುಟ ವಿಸ್ತರಣೆ ಅಷ್ಟೇ ಅಲ್ಲ, ಏನು ಬೇಕಾದರೂ ಆಗಬಹುದು: ಯತ್ನಾಳ್ ಹೊಸ ಬಾಂಬ್ | Janata news
ವಿಜಯಪುರ : ಜನವರಿ 16ರಂದು ಅಮಿತ್ ಶಾ ವಿಜಯಪುರ ಜಿಲ್ಲೆಗೆ ಬರ್ತಿದ್ದಾರೆ. ಸಂಕ್ರಮಣಕ್ಕೆ ಸಚಿವ ಸಂಪುಟ ವಿಸ್ತರಣೆಯಾಗುತ್ತೋ ಗೊತ್ತಿಲ್ಲ. ಆದ್ರೆ ಮತ್ತೇನಾದರೂ ಆಗಬಹುದು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಆಗುತ್ತೋ, ಪುನರ್ ರಚನೆಯಾಗುತ್ತೋ ಖಚಿತ ಮಾಹಿತಿ ಇಲ್ಲಾ. ನೀವು ಮಾಧ್ಯಮದವರೇ ಅದನ್ನ ಎಬ್ಬಿಸಿದ್ದೀರಿ, ನೀವು ಯಾವಾಗ್ಯಾವಾಗ ಯಾರ ಪರವಾಗಿ ಹೊಡಿತಿರೋ ಗೊತ್ತಿಲ್ಲ.
ಎಲ್ಲವೂ ಗೂಢವಾಗಿದೆ, ಮಕರ ಸಂಕ್ರಮಣದಲ್ಲಿ ಐತಿಹಾಸಿಕ ಬದಲಾವಣೆಗಳಾಗಲಿವೆ ನಿರೀಕ್ಷಿಸಿ. ಸಂಕ್ರಮಣದ ಬಳಿಕ ಉತ್ತರಾಯಣ ಕಾಲ ಆರಂಭವಾಗಲಿದೆ. ಸೂರ್ಯ ಉತ್ತರ ಪಥದಿಂದ ಬರುತ್ತಾನೆ, ಈ ವೇಳೆ ಉತ್ತರ ಕರ್ನಾಟಕಕ್ಕೆ ಉತ್ತರಾಯಣ ಆಗಲಿದೆ.
ಸಚಿವ ಸಂಪುಟ ವಿಸ್ತರಣೆಯಾಗುತ್ತೆ ಎಂಬುದನ್ನು ನಾನು ಹೇಳುವುದಿಲ್ಲ, ನಾನು ಅದರಲ್ಲಿ ಇಲ್ಲ. ದಯವಿಟ್ಟು ಯತ್ನಾಳರ ಹೆಸರು ಇದೆ ಎಂದು ಸುದ್ದಿ ಮಾಡಬೇಡಿ. ನಾನು ಮಂತ್ರಿಯಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ನನಗೆ ಮಂತ್ರಿಯಾಗಲು ಮನಸ್ಸಿಲ್ಲ. ಮುಂದೆ ಹಣೆಬರಹ ಯಾರದ್ದೂ ಯಾರಿಗೂ ಗೊತ್ತಿಲ್ಲ, ಹಣೆಬರಹದಲ್ಲಿ ಇದ್ದರೆ ಸಿಎಂ ಆಗಬಹುದು, ಆಗಬಾರದು ಅಂತೆಲ್ಲಿದೆ?.
ಕೇಂದ್ರ ಹೈಕಮಾಂಡ್ 100ಕ್ಕೆ 100ರಷ್ಟು ಒಳ್ಳೆಯ ನಿರ್ಣಯ ತೆಗೆದುಕೊಳ್ಳುತ್ತೆ ಎಂಬ ವಿಶ್ವಾಸವಿದೆ. ವಿಜಯಪುರ ಜಿಲ್ಲೆಗೆ ಇಷ್ಟು ದಿನ ಆದ ಅನ್ಯಾಯಕ್ಕೆ ನ್ಯಾಯ ಕೊಡುವ ಕೆಲಸ ಕೇಂದ್ರ ಮಾಡಲಿದೆ ಎಂದು ಅವರು ತಿಳಿಸಿದರು.