ಧರ್ಮೇಗೌಡರ ಆತ್ಮಹತ್ಯೆ ತತ್ವ ರಹಿತ, ಸ್ವಾರ್ಥ ರಾಜಕಾರಣಕ್ಕೆ ನಡೆದ ಬಲಿ - ಎಚ್ಡಿಕೆ | Janata news
ಚಿಕ್ಕಮಗಳೂರು : ಉಪ ಸಭಾಪತಿ ಧರ್ಮೇಗೌಡರ ಆತ್ಮಹತ್ಯೆಗೆ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ವಿಧಾನ ಪರಿಷತ್ ನಲ್ಲಿ ಧರ್ಮೇಗೌಡರನ್ನು ಹಿಡಿದು ಎಳೆದಾಡಿದವರನ್ನು ಪರೋಕ್ಷವಾಗಿ ತರಾಟೆ ತೆಗೆದುಕೊಂಡಿದ್ದಾರೆ ಹಾಗೂ ಆತ್ಮಾವಲೋಕನ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಎಚ್ಡಿಕೆ ಅವರು, ಧರ್ಮೇಗೌಡರ ಆತ್ಮಹತ್ಯೆಯು ಇವತ್ತಿನ ಕಲುಷಿತ, ತತ್ವ ರಹಿತ, ಸ್ವಾರ್ಥ ರಾಜಕಾರಣಕ್ಕೆ ನಡೆದ ಬಲಿ. ಸಭಾಪತಿ ಸ್ಥಾನಕ್ಕಾಗಿ ಜೆಡಿಎಸ್ನ ಜಾತ್ಯತೀತತೆ ಪರೀಕ್ಷೆ ಮಾಡಲಾಯಿತು. ಆದರೆ, ಈ ಪರೀಕ್ಷೆಯಲ್ಲಿ ಧರ್ಮೇಗೌಡ ಎಂಬ ಹೃದಯವಂತನ ಬಲಿಯಾಗಿದೆ. ಪರೀಕ್ಷೆ ಮಾಡಿದವರಿಗೆ ಈಗ ಉತ್ತರ ಸಿಕ್ಕಿರಬಹುದು. ಫಲಿತಾಂಶದಿಂದಲಾದರೂ ಅವರ ಆತ್ಮಾವಲೋಕನ ಆಗಲಿ, ಎಂದು ಸಲಹೆ ನೀಡಿದ್ದಾರೆ.
ಇದಕ್ಕೂ ಮೊದಲು ಅಗಲಿದ ಪಕ್ಷದ ಮುಖಂಡರ ಕುರಿತು ಸಂತಾಪ ವ್ಯಕ್ತ ಪಡಿಸಿದ ಎಚ್ಡಿಕೆ ಅವರು, ವಿಧಾನಪರಿಷತ್ ಉಪಸಭಾಪತಿ, ಜೆಡಿಎಸ್ ಪಕ್ಷದ ಹಿರಿಯ ಮುಖಂಡರು ಹಾಗೂ ನನ್ನ ಸಹೋದರರಂತಿದ್ದ ಎಸ್.ಎಲ್.ಧರ್ಮೇಗೌಡರ ಆತ್ಮಹತ್ಯೆ ಸುದ್ದಿ ತೀವ್ರ ಆಘಾತವನ್ನುಂಟುಮಾಡಿದೆ. ನಿಷ್ಕಲ್ಮಶ ವ್ಯಕ್ತಿತ್ವದ ಸಜ್ಜನ ರಾಜಕಾರಣಿಯೊಬ್ಬರನ್ನು ನಾವು ಕಳೆದುಕೊಂಡಿದ್ದೇವೆ. ಧರ್ಮೇಗೌಡರ ಕುಟುಂಬ ಮತ್ತು ಅಭಿಮಾನಿಗಳಿಗೆ ಈ ನೋವು ಭರಿಸುವ ಶಕ್ತಿ ಭಗವಂತ ಕರುಣಿಸಲಿ, ಎಂದು ಟ್ವೀಟ್ ಮಾಡಿದ್ದರು.
ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು ನಿನ್ನೆ ಸೋಮವಾರ ರಾತ್ರಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ನಲ್ಲಿ ಬೆಳಕಿಗೆ ಬಂದಿದೆ.
ನಿನ್ನೆ ತಡರಾತ್ರಿ ಚಿಕ್ಕಮಗಳೂರು ಜಿಲ್ಲೆ ಗುಣಸಾಗರದಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದ್ದು, ರಾತ್ರಿ 11:30ರ ಸುಮಾರಿಗೆ ಘಟನೆ ನಡೆದಿದೆ, ಎಂದು ಹೇಳಲಾಗಿದೆ.