ಮೈಸೂರಿನ ಲಾಡ್ಜ್ ನಲ್ಲಿ ಬೆಂಗಳೂರಿನ ಉದ್ಯಮಿ ಆತ್ಮಹತ್ಯೆ, ಪತಿ ಜೊತೆಗಿದ್ದ ಪತ್ನಿ ನಾಪತ್ತೆ? | Janata news
ಮೈಸೂರು : ಬೆಂಗಳೂರಿನ ಉದ್ಯಮಿಯೋರ್ವರ ಮೃತದೇಹ ಮೈಸೂರಿನ ಲಾಡ್ಜ್ವೊಂದರಲ್ಲಿ ಪತ್ತೆಯಾಗಿದೆ. ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಉಮಾಶಂಕರ್ (45) ಮೃತ ದುರ್ದೈವಿ.
ಆತನ ಜೊತೆಯಲ್ಲಿ ಬಂದಿದ್ದ ಪತ್ನಿ ಕವಿತಾ ನಾಪತ್ತೆಯಾಗಿದ್ದಾರೆ. ಉಮಾಶಂಕರ್ ಮತ್ತು ಕವಿತಾ ಇದ್ದ ಕೊಠಡಿಯಲ್ಲಿ ಇನ್ಸುಲಿನ್, ಔಷಧ ಬಾಟಲ್, ಪತಿ-ಪತ್ನಿ ಸಹಿ ಮಾಡಿರುವ ಪತ್ರ ಪತ್ತೆಯಾಗಿದ್ದು, ಅತಿಯಾದ ಇನ್ಸುಲಿನ್ನಿಂದ ಉಮಾಶಂಕರ್ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ನಾವು ಅತಿಯಾದ ಸಾಲ ಮಾಡಿಕೊಂಡಿದ್ದು, ಸಾಲ ಹಿಂತಿರುಗಿಸುವಂತೆ ಕೆಲವರು ಪೀಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂಬ ವಿಚಾರ ಡೆತ್ನೋಟ್ನಲ್ಲಿದೆ.
ಉಮಾಶಂಕರ್ ಪತ್ನಿ ಕವಿತಾ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.