ನಿನ್ ಹೆಂಡ್ತಿಗೆ ಸೀರೆ ತರಲು ಹೋಗಿದ್ಯಾ? ರಾಸ್ಕಲ್, AEEಗೆ ಬೈದ ಸಚಿವ ಮಾಧುಸ್ವಾಮಿ! | Janata news
ತುಮಕೂರು : ಮಾಧುಸ್ವಾಮಿ ಅವರು ಇಂದು ಜಿಲ್ಲೆಯ ಅಧಿಕಾರಿಗಳೊಂದಿಗೆ ಕೆಡಿಪಿ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಝೆಡ್.ಪಿ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸಗಳು ನಡೆದೇ ಇಲ್ಲ ಎಂಬುದನ್ನು ಗಮನಿಸಿದ ಸಚಿವರು, ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡರು.
ಕೆ.ಡಿ.ಪಿ ಸಭೆ ನಡೆಯುವುದಿಲ್ಲ ಎಂಬ ಉದಾಸೀನತೆ ತಾಳಿರುವ ಅಧಿಕಾರಿಗಳು ಜಿಲ್ಲೆಯಲ್ಲಿ ಒಂದೇ ಒಂದು ಕಾಮಗಾರಿ ಸಮರ್ಪಕವಾಗಿ ಮಾಡಿಲ್ಲ ಎಂದು ಕಿಡಿಕಾರಿದರು.
ತುಮಕೂರು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಎಇಇ ವಿರುದ್ಧ ಗರಂ ಆದ ಮಾಧುಸ್ವಾಮಿ ಅವರು ಜಾಡ್ಸಿ ಒದ್ದುಬಿಟ್ರೆ ಎಲ್ಲಿಗೆ ಹೋಗಿ ಬೀಳ್ತೀಯಾ ಗೊತ್ತಾ ನೀನೀಗಾ..? ರಾಸ್ಕಲ್ ಕತ್ತೆ ಕಾಯೋಕೆ ಹೇಳಿದ್ನಾ ಇಲ್ಲಿ? ಯಾರನ್ನ ಕೇಳಿದ್ದೀರಿ, ಏನೇನೂ ಇಲ್ವಾ, ಮತ್ ಯಾಕ್ ಮಾಡಿಲ್ಲ. ಯಾವ ಸೋಪು ನಿನ್ನ ಹೆಂಡ್ತಿ ಸೀರೆ ತೊಳೆಯೋಕೆ ತಗೊಂಡು ಹೋಗೋದು ನೀನು.. ರಾಸ್ಕಲ್ಸ್ ಏನ್ ತಿಳ್ಕೊಂಡಿದ್ದೀರಾ ನೀವು.. ರೆಸಲ್ಯೂಷನ್ ಮಾಡ್ಸಿ ಸಸ್ಪೆಂಡ್ ಮಾಡ್ಸಿ ಈ ನನ್ಮಕ್ಕಳನ್ನ ಎಂದು ಸಭೆಯಲ್ಲಿ ಕೂಗಾಡುತ್ತಾ, ನಾಲಿಗೆ ಹರಿಯಬಿಟ್ಟರು.
ಒಂದು ಹಂತದಲ್ಲಿ ಅಧಿಕಾರಿಗಳ ಉತ್ತರಕ್ಕೆ ಆಕ್ರೋಶಗೊಂಡು ತಾಳ್ಮೆ ಕಳೆದುಕೊಂಡ ಸಚಿವರು, ಈ ನನ್ಮಕ್ಕಳು ಎಲ್ಲರನ್ನೂ ಸಸ್ಪೆಂಡ್ ಮಾಡ್ರೀ… ಎನ್ನುತ್ತ ಸಭೆಯಲ್ಲೇ ಜಿಪಂ ಸಿಇಒಗೆ ಸಚಿವ ಮಾಧುಸ್ವಾಮಿ ಸೂಚನೆ ನೀಡಿದರು.
ಸಂಸದ ಬಸವರಾಜ್, ಜಿಪಂ ಅಧ್ಯಕ್ಷೆ ಲತಾ ರವಿಕುಮಾರ್, ಡಿಸಿ ಡಾ. ರಾಕೇಶ್ ಕುಮಾರ್, ಜಿಪಂ ಸಿಇಒ ಶುಭಕಲ್ಯಾಣ್ ಸಭೆಯಲ್ಲಿ ಇದ್ದರು. ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.