ಏಳು ಮಂದಿಗೆ ಸಂಪುಟ ಭಾಗ್ಯ? ಜನವರಿ 13 ಅಥವಾ 14ರಂದು ಸಚಿವ ಸಂಪುಟ ವಿಸ್ತರಣೆ! | Janata news
ಬೆಂಗಳೂರು : ಜ. 13 ಅಥವಾ 14ರಂದು ಸಂಪುಟ ವಿಸ್ತರಣೆ ಆಗುತ್ತದೆ ಎಂದು ದೆಹಲಿಗೆ ಹೋಗಿ ಬಂದ ಬಳಿಕ ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 54ನೇ ಪುಣ್ಯ ತಿಥಿ ಅಂಗವಾಗಿ ಸೋಮವಾರ ವಿಧಾನಸೌಧದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಪ್ರಮಾಣ ವಚನ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. ಅವರಿಗೆ ಅನುಕೂಲಕರ ದಿನ ನೋಡಿಕೊಂಡು ದಿನ ಅಂತಿಗೊಳಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು. ತಾವು ಹೇಳಿದವರೆಲ್ಲರಿಗೂ ಸಂಪುಟದಲ್ಲಿ ಸ್ಥಾನ ಕೊಡಲು ಹೈಕಮಾಂಡ್ ಒಪ್ಪಿಕೊಂಡಿರುವ ವಿಚಾರವನ್ನು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಜ.14ರಂದು ಸಂಕ್ರಾಂತಿ ಹಬ್ಬ ಇರುವ ಹಿನ್ನೆಲೆ ಜ.13ರ ಮಧ್ಯಾಹ್ನದ ನಂತರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಒಂದೆರಡು ವ್ಯತ್ಯಾಸದೊಂದಿಗೆ ನಾವು ಹೇಳಿದವರೆಲ್ಲ ಮಂತ್ರಿಮಂಡಲ ಸೇರೋದು ಪಕ್ಕಾ ಎಂದು ಯಡಿಯೂರಪ್ಪ ಬೆಂಗಳೂರಲ್ಲಿ ತಿಳಿಸಿದರು.
ನೂತನ ಸಂಭಾವ್ಯ ಸಚಿವರು: ಎಂಟಿಬಿ ನಾಗರಾಜ್, ಆರ್ ಶಂಕರ್, ಸಿ ಪಿ ಯೋಗೇಶ್ವರ್, ಮುನಿರತ್ನ, ಹಾಲಪ್ಪ ಆಚಾರ್, ಉಮೇಶ್ ಕತ್ತಿ, ಅರವಿಂದ್ ಬೆಲ್ಲದ್ ಮತ್ತು ಪೂರ್ಣಿಮಾ , ಈ ಎಂಟು ಹೆಸರು ಸಂಭಾವ್ಯರ ಪಟ್ಟಿಯಲ್ಲಿ ಪ್ರಧಾನವಾಗಿ ಕಾಣಿಸಿವೆ.
ಇವರ ಪೈಕಿ ಎಂಟಿಬಿ ನಾಗರಾಜ್, ಆರ್ ಶಂಕರ್, ಉಮೇಶ್ ಕತ್ತಿ ಮತ್ತು ಸಿಪಿ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನಿಶ್ಚಿತ ಎನ್ನಲಾಗುತ್ತಿದೆ. ಕೇವಲ ಸಂಪುಟ ವಿಸ್ತರಣೆ ಮಾತ್ರ ಆದಲ್ಲಿ ಮೇಲೆ ತಿಳಿಸಿದ ಎಂಟು ಮಂದಿ ಪೈಕಿ ಏಳು ಮಂದಿಗೆ ಸ್ಥಾನ ಸಿಗಲಿದೆ. ಪುನಾರಚನೆ ಆದಲ್ಲಿ ಎಲ್ಲಾ ಎಂಟು ಮಂದಿಗೂ ಮಂತ್ರಿಭಾಗ್ಯ ಸಿಗುವ ನಿರೀಕ್ಷೆ ಇದೆ.