ಮಗ ಮಾಡಿದ ಸಾಲದಿಂದಾಗಿ ಸಾಲಗಾರರ ಕಿರುಕುಳ ತಡೆಯಲಾರದೆ ತಂದೆ ಆತ್ಮಹತ್ಯೆ: ಅಂತ್ಯಸಂಸ್ಕಾರಕ್ಕೆ ಬರುವಂತೆ ತಾಯಿ ಗೋಳಾಟ! | Janata news
ಹಾಸನ : ಮಗ ಮಾಡಿದ ಸಾಲದಿಂದಾಗಿ ಸಾಲಗಾರರ ಕಿರುಕುಳ ತಡೆಯಲಾರದೆ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ತಾಲ್ಲೂಕಿನ ಸಜ್ಜೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಜ್ಜೇನಹಳ್ಳಿ ಗ್ರಾಮದ ನಿವಾಸಿ ಶಿವಣ್ಣ (50) ಆತ್ಮಹತ್ಯೆ ಮಾಡಿಕೊಂಡಾತ. ಮಗ ಮಂಜುನಾಥ್ 25 ಲಕ್ಷ ರೂಪಾಯಿಗು ಹೆಚ್ಚು ಸಾಲ ಮಾಡಿ, ಸಾಲಗಾರರ ಕಾಟ ತಾಳಲಾರದೆ ಮೂರು ತಿಂಗಳ ಹಿಂದೆಯೇ ಊರು ಬಿಟ್ಟು ಹೋಗಿದ್ದ.
ಮಂಜುನಾಥ್ ಮಾಡಿದ್ದ ಸಾಲ ಪೋಷಕರಿಗೆ ತಿಳಿದಿರಲಿಲ್ಲ. ಇತ್ತ ಮಂಜುನಾಥ್ ಸುಳಿವು ಸಿಗದಿದ್ದರಿಂದ ಸಾಲ ಕೊಟ್ಟವರು ಆತನ ಮನೆ ಬಳಿ ಬಂದು ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದರು. ಇದರಿಂದ ಮನನೊಂದ ಶಿವಣ್ಣ ವಿಷ ಸೇವಿಸಿ, ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪತಿಯ ಸಾವಿನಿಂದ ಕಂಗ್ಗೆಟ್ಟಿರುವ ಮಡದಿ, ತಂದೆ ಅಂತ್ಯಸಂಸ್ಕಾರಕ್ಕೆ ಆಗಮಿಸುವಂತೆ ಮಗನಿಗೆ ಕಣ್ಣೀರ ಮನವಿ ಮಾಡುತ್ತಿದ್ದಾರೆ. ತಾಯಿ ಹಾಗೂ ಅಕ್ಕ ಎಲ್ಲಿದ್ದರೂ ಬಂದು ತಂದೆ ಅಂತ್ಯಸಂಸ್ಕಾರ ಮಾಡುವಂತೆ ಮಂಜುನಾಥ್ನನ್ನು ಬೇಡಿಕೊಳ್ಳುತ್ತಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.