ಪಕ್ಷಕ್ಕೆ, ಸರ್ಕಾರಕ್ಕೆ ಯೋಗೇಶ್ವರ್ ಕೊಡುಗೆ ಏನು? ದೆಹಲಿಯತ್ತ ಪ್ರಯಾಣ ಬೆಳೆಸಿದ ರೇಣುಕಾಚಾರ್ಯ! | Janata news
ಬೆಂಗಳೂರು : ದಾವಣಗೆರೆ ಜಿಲ್ಲೆ ಹೊನ್ನಾಳಿಯ ಶಾಸಕ ಎಂ.ಪಿ.ರೇಣುಕಾಚಾರ್ಯ ತರಾತುರಿಯಲ್ಲಿ ದೆಹಲಿಗೆ ಹೊರಟಿದ್ದಾರೆ.
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬ್ಲ್ಯಾಕ್ಮೇಲ್ ಮಾಡಿದವರಿಗೆ, ನಾಯಕತ್ವ ಬದಲಾವಣೆ ಮಾಡಲು ಹೊರಟವರಿಗೆ ಮಂತ್ರಿಗಿರಿ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ, ಮೋದಿಯವರ ಮುಖ ನೋಡಿ ಜನ ಬೆಂಬಲ ನೀಡಲಾಗಿದೆ. ಯೋಗೀಶ್ವರ್ ಮುಖ ನೋಡಿ ಮುಖ ನೋಡಿ ಬೆಂಬಲ ನೀಡಿಲ್ಲ. ಪಕ್ಷಕ್ಕೆ, ಸರ್ಕಾರಕ್ಕೆ ಯೋಗೇಶ್ವರ್ ಕೊಡುಗೆ ಏನು? ಯೋಗೇಶ್ವರ್ ಅವರ ಕ್ಷೇತ್ರದಲ್ಲಿಯೇ ಸೋತಿದ್ದಾರೆ ಎಂದು ಹೇಳಿದರು.
ತಮ್ಮ ಕ್ಷೇತ್ರದಲ್ಲಿಯೇ ಅವರಿಗೆ ಗೆಲ್ಲಲು ಆಗಲಿಲ್ಲ. ಲೋಕಸಭೆ ಚುನಾವಣೆ, ರಾಮನಗರ ಉಪಚುನಾವಣೆಯಲ್ಲಿ ತಾವು ಸ್ಪರ್ಧಿಸದೇ ಬೇರೆಯವರನ್ನು ನಿಲ್ಲಿಸಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡರು. ಮೆಗಾಸಿಟಿ ಯೋಜನೆಯಲ್ಲಿ ದೊಡ್ಡ ಹಗರಣ ಆಗಿದೆ. ನಮ್ಮ ನಾಯಕರಿಗೆ ಈ ಬಗ್ಗೆ ದೂರು ಹೇಳುವೆ. ಸಮಯ ಬಂದಾಗ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದರು.
ದೆಹಲಿಯಲ್ಲಿ ಯಾವುದೇ ನಾಯಕರನ್ನು ಭೇಟಿಯಾಗಲು ನಾನು ಸಮಯ ಕೇಳಿಲ್ಲ. ಯಾರಾದರೂ ಸಿಕ್ಕರೆ ಮಾತನಾಡುತ್ತೇನೆ. ನಾನು ಎಂದಿಗೂ ಪಕ್ಷ ಸಂಘಟನೆ ವಿರುದ್ಧವಾಗಲೀ, ನಾಯಕತ್ವದ ಬಗ್ಗೆಯಾಗಲೀ ಮಾತನಾಡಿಲ್ಲ. ಶಾಸಕರಲ್ಲಿ ವಿಷಬೀಜ ಬಿತ್ತಿ ಹುಳಿಹಿಂಡಲು ಯತ್ನಿಸಿದವರಿಗೆ ಮಣೆ ಹಾಕಿದ್ದಾರೆ ಎಂದು ಬೇಸರ ತೋಡಿಕೊಂಡರು.