ಇದು ಡಬಲ್ ಎಂಜಿನ್ ಸರ್ಕಾರ: ಅಮಿತ್ ಷಾ ಹೇಳಿದ ಆ ಎರಡು ಎಂಜಿನ್ ಯಾವುದು? | Janata news
ಬೆಳಗಾವಿ : ಬೆಳಗಾವಿಯ ಜನಸೇವಕ ಸಭೆಯಲ್ಲಿ ಭಾಷಣ ಮಾಡಿದ ಕೇಂದ್ರ ಗೃಹಸಚಿವ ಅಮಿತ್ ಷಾ, ರಾಜ್ಯದ ಜನರಿಗೆ, ಕರ್ನಾಟಕ ಸರ್ಕಾರಕ್ಕೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಅಭಿವೃದ್ಧಿಗೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರ ಇದೆ. ಇದರಿಂದ ರಾಜ್ಯದ ಅಭಿವೃದ್ಧಿ ಸಾಧ್ಯ. ಮುಂದೆ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಬರುತ್ತಿದೆ. ಅಲ್ಲಿಯೂ ಬಿಜೆಪಿಗೆ ಮತ ನೀಡಿ ಬಿಜೆಪಿ ಗೆಲ್ಲಿಸಿ. ರಾಜ್ಯದ ಅಭಿವೃದ್ಧಿಗಾಗಿ ನಮಗೆ ಮತ ನೀಡಿ ಎಂದು ಅಮಿತ್ ಶಾ ಮನವಿ ಮಾಡಿದರು.
ಬಿಜೆಪಿ ಮತ್ತು ಯಡಿಯೂರಪ್ಪ ಆಡಳಿತದ ಮೇಲೆ ಕರ್ನಾಟಕದ ಜನತೆ ನಂಬಿಕೆ ಇಟ್ಟಿದ್ದಾರೆ. ಎಲ್ಲ ಚುನಾವಣೆಗಳಲ್ಲೂ ಬಿಜೆಪಿಯ ಕೈ ಹಿಡಿದಿದ್ದೀರಿ. ಪಂಚಾಯತ್ ಚುನಾವಣೆಯಲ್ಲಿ ಇತಿಹಾಸ ಬರೆದ ಬೆಳಗಾವಿ ಜನತೆಗೆ ಧನ್ಯವಾದ. ಮಕರ ಸಂಕ್ರಾಂತಿ ದೇಶದ ಅಭಿವೃದ್ಧಿಯ ದಿಕ್ಕನ್ನು ಸೂಚಿಸಿದೆ ಎಂದು ಅಮಿತ್ ಷಾ ಶ್ಲಾಘಿಸಿದರು.
ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಮಾಡುತ್ತಿದ್ದೇವೆ. ಮುಸ್ಲಿಂ ಮಹಿಳೆಯರಿಗೆ ಆಗುತ್ತಿದ್ದ ಅನ್ಯಾಯ ತಪ್ಪಿಸಲು ಟ್ರಿಪಲ್ ತಲಾಕ್ ರದ್ದು ಮಾಡಿದ್ದೇವೆ. ಸರ್ಜಿಕಲ್ ಸ್ಟ್ರೈಕ್ ಮಾಡಿ ಭಯೋತ್ಪಾದಕರಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದೇವೆ, ಇದು ಸಿಂಗ್ ಕೈಯಿಂದ ಆಗುತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ?
ನರೇಂದ್ರ ಮೋದಿ ಆರೋಗ್ಯ ಯೋಜನೆ ಜಾರಿ ಮಾಡಿದ್ದಾರೆ. ಆಯುಷ್ಮಾನ್ ಭಾರತ್ ಜಾರಿ ಮಾಡಿದ್ದಾರೆ. ಬಡತನದ ಬಗ್ಗೆ ಭಾಷಣ ಮಾಡುವ ಕಾಂಗ್ರೆಸ್ ಇದೆಲ್ಲ ಯಾಕೆ ಮಾಡಲಿಲ್ಲ? ಕಾಂಗ್ರೆಸ್ನವರು ಟೀಕೆ ಮಾಡುವುದರಲ್ಲಿ ನಿರತರಾಗಿದ್ದಾರೆ.
ಪ್ರತಿ ಮನೆಗೆ ಬ್ಯಾಂಕ್ ಖಾತೆ ಆಗಿದೆ. ಹೊಗೆಮುಕ್ತ ದೇಶಕ್ಕಾಗಿ ಪ್ರತಿಮನೆಗೂ ಸಿಲಿಂಡರ್ ನೀಡುತ್ತಿದ್ದೇವೆ. ಹಲವು ಮನೆಗಳಲ್ಲಿ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಈಗ ಮನೆ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ಆಯುಷ್ಮಾನ್ ಭಾರತ್ ಯೋಜನೆಯಡಿ ₹5 ಲಕ್ಷದವರೆಗೆ ವಿಮೆ ನೀಡಲಾಗಿದೆ ಎಂದರು.
ಯಡಿಯೂರಪ್ಪ ಜೀ ನೇತೃತ್ವದಲ್ಲಿ ಕರೋನ ಪರಿಸ್ಥಿತಿಯನ್ನ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಒಳ್ಳೆಯ ಕೆಲಸ ಮಾಡಿದ್ದಾಗ ಕಾಂಗ್ರೆಸ್ ಜೊತೆಯಲ್ಲಿ ನಿಲ್ಲಲಿಕ್ಕೂ ಬರುವುದಿಲ್ಲ. ಕರೊನಾ ಸಂದರ್ಭದಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಯ್ತು. ಆದರೆ ಕಾಂಗ್ರೆಸ್ನವರು ಕರೊನಾ ಲಸಿಕೆ ವಿಚಾರದಲ್ಲೂ ರಾಜಕೀಯ ಮಾಡಿದರು.
ದೆಹಲಿಯಲ್ಲಿ ನರೇಂದ್ರ ಮೋದಿ, ಕರ್ನಾಟಕದಲ್ಲಿ ಯಡಿಯೂರಪ್ಪ ಸರ್ಕಾರ. ಇದು ಡಬಲ್ ಎಂಜಿನ ಸರ್ಕಾರ. ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಮೋದಿ-ಯಡಿಯೂರಪ್ಪ ಬಗ್ಗೆ ಷಾ ಮೆಚ್ಚುಗೆ ವ್ಯಕ್ತಪಡಿಸಿದರು.