900 ಜನರಿಗೆ ಪಂಗನಾಮ, 20 ಕೋಟಿ ರೂಪಾಯಿ ವಂಚಿಸಿರುವ ಖತರ್ನಾಕ್ ದಂಪತಿ! | Janata news
ಬೆಂಗಳೂರು : ನಗರದ ಗಿರಿನಗರ ಪೊಲೀಸ್ ಠಾಣೆ, ಹೊಸಕೆರೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಹಣ ಡಬ್ಲಿಂಗ್ ಮಾಡಿಕೊಡುವುದಾಗಿ ನೂರಾರು ಜನರಿಗೆ ನಂಬಿಸಿ ಸುಮಾರು 20 ಕೋಟಿ ರೂ. ವಂಚಿಸಿರುವ ಆರೋಪ ಖತರ್ನಾಕ್ ದಂಪತಿ ಮೇಲಿದೆ.
ಗಿರಿನಗರದ ವಂಚಕ ದಂಪತಿ ಜ್ಞಾನೇಶ್-ಲೀಲಾವತಿ ಹಾಗೂ ಅವರ ಮಗ ಮನೋಜ್ ಚೀಟಿ, ಷೇರುಪೇಟೆಯಲ್ಲಿ ಬಂಡವಾಳ ಹೂಡಿಕೆ ಮಾಡಿ ಹಣ ಡಬ್ಬಲ್ ಮಾಡಿಕೊಡುವುದಾಗಿ ನಂಬಿಸಿ ಬರೋಬ್ಬರಿ 900 ಜನರಿಂದ ಸುಮಾರು 20 ಕೋಟಿ ರೂ. ಹಣ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ.
ಈ ಆರೋಪಿಗಳ ಹೆಸರು ಜ್ಞಾನೇಶ್-ಲೀಲಾವತಿ. ಈ ದಂಪತಿ ಸೇರಿದಂತೆ ಮಗ ಮನೋಜ್ನನ್ನೂ ಪೊಲೀಸರು ಬಂಧಿಸಿದ್ದಾರೆ.
ಜನರಿಗೆ ಹೆಚ್ಚಿನ ಬಡ್ಡಿ ಆಸೆ ತೋರಿಸಿ ಯಾಮಾರಿಸುತ್ತಿದ್ದ ಜ್ಞಾನೇಶ್ ಮತ್ತು ಲೀಲಾವತಿ ದಂಪತಿ, ಪತ್ನಿಗೆ ಹೇಳದಂತೆ ಪತಿಯಿಂದ, ಪತಿಗೆ ಗೊತ್ತಾಗದಂತೆ ಪತ್ನಿಯಿಂದ ಹಣ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಮೃತ ಗಂಡನಿಗೆ ಬಂದಿದ್ದ ಹಣವನ್ನು ಮಂಜುಳಾ ಎಂಬುವರು ಒಟ್ಟು 20 ಲಕ್ಷ ಹಣ ಹೂಡಿ ಯಾಮಾರಿದ್ದಾರೆ. ನಿವೃತ್ತ ಕೆಎಸ್ ಆರ್ ಟಿಸಿ ಚಾಲಕ ನಾರಾಯಣ್ ಮನೆ ಖರೀದಿ ಆಸೆಗೆ ಒಟ್ಟು 50 ಲಕ್ಷ ಹಣ ಹೂಡಿಕೆ ಮಾಡಿದ್ದರು. ಇಗೆ ಸುಮಾರು 900ಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದಾರೆ ಎನ್ನಲಾಗಿದೆ.
ಹಣ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಜನರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಜ್ಞಾನೇಶ್ ಮತ್ತು ಲೀಲಾವತಿ ದಂಪತಿಯ ಅಳಿಯ ರವಿಕುಮಾರ್ ಮತ್ತು ಮಗಳು ಮೇಘನಾರನ್ನು ಬಂಧಿಸಿ. ಹನುಮಂತನಗರ ಪೊಲೀಸ್ ಠಾಣೆ ರೈಟರ್ ಆಗಿರುವ ಅಳಿಯ ರವಿಕುಮಾರ್, ತನಿಖೆ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದರು. ಕೂಡಲೇ ಈ ಕೇಸ್ ಅನ್ನು ಸಿಐಡಿಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.