ಕೆಂಪುಕೋಟೆ ಹತ್ತಿದವರು ಭಯೋತ್ಪಾದಕರು: ಬಿ ಸಿ ಪಾಟೀಲ್ | Janata news
ಕೊಪ್ಪಳ : ದೆಹಲಿಯಲ್ಲಿ ನಡೆಯುತ್ತಿರುವುದು ರೈತರ ಹೋರಾಟವಲ್ಲ, ಭಯೋತ್ಪಾದಕರ ರೀತಿಯ ಕೃತ್ಯ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ದೆಹಲಿ ಪ್ರತಿಭಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವವರು ಭಯೋತ್ಪಾದಕರು. ಇವರಿಗೆಲ್ಲ ಬೇರೆ ಬೇರೆ ದೇಶದ ಬೆಂಬಲ ಇದೆ. ಕಾಂಗ್ರೆಸ್ ಬೆಂಬಲ ಭಯೋತ್ಪಾದಕರಿಗೆ ಇದೆ ಎಂದಿದ್ದಾರೆ.
ರೈತರು ಯಾವತ್ತೂ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡಿದ್ದು ಇತಿಹಾಸದಲ್ಲಿ ಇಲ್ಲ. ಇವರಿಗೆಲ್ಲ ಪಾಕಿಸ್ತಾನದವರ ಕುಮ್ಮಕ್ಕು ಇದೆ. ಕೆಂಪು ಕೋಟೆ ಬಳಿ ಹೋಗಿ ಗಲಾಟೆ ಮಾಡುತ್ತಾರೆ ಅಂದರೆ ನೀವೆ ಅರ್ಥ ಮಾಡಿಕೊಳ್ಳಬೇಕು ಎಂದರು.
ದೆಹಲಿಯಲ್ಲಿ ನಡೆಯುತ್ತಿರುವ ಭಯೋತ್ಪಾದಕರ ಕೃತ್ಯಕ್ಕೆ ರೈತರ ಬಣ್ಣ ಕಟ್ಟುತ್ತಿರುವ ಹೆಚ್.ಕೆ ಪಾಟೀಲರು ಯಾವತ್ತಾದ್ದರೂ ಬೇಸಾಯ ಮಾಡಿದ್ದಾರಾ? ಅಥವಾ ಹೊಲದಲ್ಲಿ ಒಂದು ಹನಿ ಸುರಿಸಿ ಬಿತ್ತನೆ ಮಾಡಿದ್ದಾರಾ ಎಂಬುದನ್ನು ಮೊದಲು ಹೇಳಲಿ ಎಂದು ಇದೇ ವೇಳೆ ಸವಾಲ್ ಹಾಕಿದವರು. ಇಂತಹ ಕೃತ್ಯಕ್ಕೆ ಬೆಂಬಲಿಸುವ ಅವರು ಮತ್ತು ಕಾಂಗ್ರೆಸ್ ಪಕ್ಷ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ನಿಜವಾದ ರೈತರು ಯಾರೂ ಸಹ ಪ್ರತಿಭಟನೆ ಮಾಡುತ್ತಿಲ್ಲ. ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವಎಲ್ಲರೂ ಭಯೋತ್ಪಾದಕರು ಎಂದರು.
ಸಂವಿಧಾನದಲ್ಲಿ ಹಾಗೂ ದೇಶದ ಹಿರಿಮೆಯಲ್ಲಿ ಕೆಂಪು ಕೋಟೆಗೆ ತನ್ನದೇ ಆದ ಗೌರವ ಇದೆ. ಕೆಂಪು ಕೋಟೆಯ ಮೇಲೆ ಭಾರತದ ಧ್ವಜ ಬಿಟ್ಟು, ಬೇರೆ ಧ್ವಜಗಳಿಗೂ ಕನಸಿನಲ್ಲೂ ಅವಕಾಶವಿಲ್ಲ. ಇಂತಹ ಸಂಧರ್ಭದಲ್ಲಿ ಕೆಂಪು ಕೋಟೆ ಮೇಲೆ ಬೇರೆ ಧ್ವಜ ಹಾರಿಸುತ್ತಾರೆ. ಎಂದರೆ, ಅವರನ್ನು ಭಯೋತ್ಪಾದಕರೆನ್ನದೆ ಮತ್ತೆ ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು. ಯಾರೇ ಕಾನೂನು ಕೈಗೆ ತಗೆದುಕೊಂಡರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗವುದು ಎಂದು ಬಿ ಸಿ ಪಾಟೀಲ್ ಹೇಳಿದರು.