ದೆಹಲಿ ರೈತರ ದಂಗೆಗೆ ಕಾಂಗ್ರೆಸ್, ಪಾಕಿಸ್ತಾನ, ಚೀನಾದಿಂದ ಫಂಡಿಂಗ್: ಯತ್ನಾಳ್ ಕಿಡಿ | Janata news
ವಿಜಯಪುರ : ದೆಹಲಿಯಲ್ಲಿ ರೈತರ ಹೋರಾಟ ಹಿಂಸಾಚಾರ ರೂಪ ಪಡೆದ ಘಟನೆಯಲ್ಲಿ ಪಾಕಿಸ್ತಾನ ಮತ್ತು ಚೀನಾದ ಕೈವಾಡವಿದೆ. ಅಲ್ಲದೆ, ಈ ಹಿಂಸಾಚಾರಕ್ಕೆ ಆ ದೇಶಗಳು ಫಂಡಿಂಗ್ ಕೂಡ ಮಾಡಿವೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಕೆಡಿಸಲು ದೇಶದಲ್ಲಿರುವ ದೇಶವಿರೋಧಿ ಶಕ್ತಿಗಳು ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿವೆ. ರೈತರ ಪ್ರಗತಿಗಾಗಿ ಕೃಷಿ ಕಾನೂನುಗಳನ್ನು ಜಾರಿಗೆ ತರಲಾಗಿದೆ.
ಈ ಮಸೂದೆಗಳನ್ನು ವಿಫಲಗೊಳಿಸಲು ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ಆಮ್ ಆದ್ಮಿ ಪಕ್ಷಗಳು ಪ್ರಯತ್ನಿಸುತ್ತಿವೆ. ಇದರಲ್ಲಿ ಚೀನಾ ಮತ್ತು ಪಾಕಿಸ್ತಾನದ ಕೈವಾಡವೂ ಇದೆ ಎಂದಿದ್ದಾರೆ.
ದೆಹಲಿಯ ರೈತರ ಪ್ರತಿಭಟನೆ ವೇಳೆ ನಡೆದ ಗಲಭೆಗೆ ಕಾಂಗ್ರೆಸ್ ಜೊತೆ ಪಾಕಿಸ್ತಾನ ಹಾಗೂ ಚೀನಾ ಫಂಡಿಂಗ್ ಮಾಡಿವೆ. ಮುಂದಿನ 20 ವರ್ಷ ಮೋದಿ ಅವರೇ ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ. ಇದರಿಂದ ಹತಾಶರಾಗಿರುವ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಇಂತಹ ಘಟನೆಗಳಿಗೆ ಮುಂದಾಗಿದ್ದಾರೆ ಎಂದರು.
ಈ ಬಗ್ಗೆ ಗುಪ್ತಚರ ಇಲಾಖೆ ಮೊದಲೇ ಮಾಹಿತಿ ನೀಡಿದ್ದವು. ಆದರೆ, ಸುಪ್ರೀಂ ಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಕೈಕಟ್ಟುವಂತಾಯಿತು. ಇಲ್ಲದಿದ್ದರೆ, ಪೊಲೀಸರು ಅನುಮತಿಯನ್ನೇ ಕೊಡುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.