ಎಸ್ಪಿ ಹೆಸರಿನಲ್ಲಿ ಪಿಎಸ್ಐಗೇ ಟೋಪಿ, ಪೊಲೀಸ್ ಅಧಿಕಾರಿಗೇ ಲಕ್ಷಾಂತರ ರೂಪಾಯಿ ಪಂಗನಾಮ! | Janata news
ಕಲಬುರ್ಗಿ : ವ್ಯಕ್ತಿಯೊಬ್ಬನಿಂದ ಪೊಲೀಸ್ ಅಧಿಕಾರಿಗೇ ಪಂಗನಾಮ ಹಾಕಿರೋ ಘಟನೆ ಕಲಬುರ್ಗಿ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಬಳಿ ಕೆಲಸ ಮಾಡಿಸಿ ಕೊಡೋದಾಗಿ ನಯವಾದ ಮಾತುಗಳನ್ನಾಡಿ ಆರೋಪಿ ವಂಚನೆ ಮಾಡಿದ್ದಾನೆ.
ಎಸ್ಪಿ ಮೇಡಂ ನನಗೆ ಕ್ಲೋಸ್. ನಿಮಗೆ ಏನೇ ಅಡ್ಡಿ ಬಂದರೂ ತೊಂದರೆಯಾಗದಂತೆ ನೋಡಿಕೊಳ್ಳುವೆ. ನಿಮಗೆ ಬೇಕಾದ ಎಲ್ಲ ಹೆಲ್ಪ್ ಮಾಡಿಸುವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಸರಿನಲ್ಲಿ ಪಿಎಸ್ಐ (ಪೊಲೀಸ್ ಸಬ್ ಇನ್ಸ್ ಪೆಕ್ಟರ್)ಗೆ ನಂಬಿಸಿ ಎಂಟುವರೆ ಲಕ್ಷ ರೂ. ದೋಚಿದ ಪ್ರಸಂಗ ನಡೆದಿದೆ.
ಸದ್ಯ ಡಿಸಿಬಿ ಯಲ್ಲಿ ಪಿ.ಎಸ್.ಐ. ಆಗಿರೋ ಮಂಜುನಾಥ ಹೂಗಾರ ವಂಚನೆಗೊಳಗಾದ ಅಧಿಕಾರಿಯಾಗಿದ್ದಾನೆ. ಪಿ.ಎಸ್.ಐ. ಮಂಜುನಾಥ ಹೂಗಾರ್ ಗೆ ಬರೋಬ್ಬರಿ 8.50 ಲಕ್ಷ ರೂಪಾಯಿ ಪಂಗನಾಮ ಹಾಕಿರುವವನು ಜೇವರ್ಗಿ ತಾಲೂಕಿನ ಕೊಂಡಗುಳಿ ಗ್ರಾಮದ ಕಾಶಿಂ ಬಾಬು ಪಟೇಲ್ (30).
ಘಟನೆ -
ತನಗೆ ಕಲಬುರ್ಗಿ ಎಸ್.ಪಿ. ಸಿಮಿ ಮರಿಯಮ್ ಜಾರ್ಜ್ ಗೊತ್ತು, ಉನ್ನತ ಮಟ್ಟದ ಅಧಿಕಾರಿಗಳು ಗೊತ್ತು ಅಂತ ಪಿ.ಎಸ್.ಐ. ಬಳಿ ಪಟೇಲ್ ಫೋಜ್ ಕೊಟ್ಟಿದ್ದ. ಹಿರಿಯ ಅಧಿಕಾರಿಗಳ ಜೊತೆ ನಿಂತು ತೆಗೆಯಿಸಿಕೊಂಡಿದ್ದ ಫೋಟೋ ತೋರಿಸಿ ಬಿಲ್ಡಪ್ ಕೊಟ್ಟಿದ್ದ. ತನಗೆ ಕಲಬುರ್ಗಿ ಎಸ್.ಪಿ. ತುಂಬಾ ಕ್ಲೋಸ್, ಏನೇ ಸಮಸ್ಯೆ ಇದ್ದರೂ ಕೆಲಸ ಮಾಡಿಸಿಕೊಡೋದಾಗಿ ಭರವಸೆ ನೀಡಿದ್ದ. ಮೊಬೈಲ್ ನಂಬರ್ ಒಂದನ್ನು ನೀಡಿದ್ದ ಆರೋಪಿ ಪಟೇಲ್, ಇದು ಕಲಬುರ್ಗಿ ಎಸ್.ಪಿ. ಯವರ ಖಾಸಗಿ ನಂಬರ್ ಆಗಿದೆ. ಅವರ ವಾಟ್ಸ್ ಅಪ್ ಗೆ ಕೇವಲ ಮೆಸೇಜ್ ಮಾತ್ರ ಮಾಡಿ ಎಂದು ಹೇಳಿದ್ದ.
ಕೇವಲ ವಾಟ್ಸ್ಆಯಪ್ ಮೆಸೇಜ್ ಮಾತ್ರ ಮಾಡಬೇಕೆಂದು ತಿಳಿಸಿ ವಾಟ್ಸ್ ಆಯಪ್ನಲ್ಲಿ ಎಸ್ಪಿ ಮೇಡಂ ಅವರ ಡಿಪಿ ಇಟ್ಟು ನಂಬಿಸಲಾಗಿತ್ತು. ತನ್ನ ಕೆಲಸಕ್ಕಾಗಿ ತುರ್ತಾಗಿ ಹಣ ಬೇಕಾಗಿದೆ ಎಂದು ವಾಟ್ಸ್ಆಯಪ್ ಸಂದೇಶ ಕಳುಹಿಸಿದ್ದರಿಂದ 2.50 ಲಕ್ಷ ರೂ. ಹಾಗೂ 6 ಲಕ್ಷ ರೂ.ನಗದು ರೂಪದಲ್ಲಿ ಸ್ನೇಹಿತರ ಮೂಲಕ ಕಳುಹಿಸಿಕೊಡಲಾಗಿತ್ತು ಎಂದು ಪಿಎಸ್ಐ ಹೂಗಾರ ದೂರು ಸಲ್ಲಿಸಿದ್ದಾರೆ.
ಕಳೆದ ಫೆ.3ರಂದು ಸಂಜೆ 6ರ ಸುಮಾರಿಗೆ ವಾಟ್ಸ್ಆಯಪ್ ಕರೆ ಬಂದಿತ್ತು. ಅದರಲ್ಲಿ ಹೆಣ್ಣು ಮಕ್ಕಳು ಉರ್ದು ಮಿಶ್ರಿತ ಹಿಂದಿಯಲ್ಲಿ ಮಾತನಾಡುವ ಹಾಗೂ ಮಕ್ಕಳು ಅಳುವ ಶಬ್ದ ಕೇಳಿದ್ದರಿಂದ ಮೊಬೈಲ್ ನಂಬರ್ ನಿಖರತೆ ಬಗ್ಗೆ ಸಂಶಯ ಉಂಟಾಗಿತ್ತು. ತದನಂತರ ಎಸ್ಪಿ ಮೇಡಂ ಅವರನ್ನು ಭೇಟಿಯಾಗಿ ವಿಷಯ ತಿಳಿಸಿದಾಗ ಈ ತರಹದ ನಂಬರ್ ಯಾವುದೂ ಇಲ್ಲ. ಜತೆಗೆ ಯಾವುದೇ ಮೆಸೇಜ್ ಮಾಡಿಲ್ಲ ಎಂದು ತಿಳಿಸಿದರು.
ಒಟ್ಟಾರೆ 8.50 ಲಕ್ಷ ರೂ. ವಂಚಿಸಲಾಗಿದೆ ಎಂದು ಪಿಎಸ್ಐ ಮಂಜುನಾಥ ಹೂಗಾರ ಇಲ್ಲಿನ ಸ್ಟೇಷನ್ ಬಜಾರ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಬಾಲಕಿ ಸಾವಿಗೆ ಪಿ.ಎಸ್.ಐ. ಹೂಗಾರ್ ಕಾರಣ ಎಂದು ವಿಧಾನ ಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಅಜಯಸಿಂಗ್ ನೇತೃತ್ವದಲ್ಲಿ ಕಲಬುರ್ಗಿಯಲ್ಲಿ ರಸ್ತಾ ರೋಖೋ ಮಾಡಲಾಗಿತ್ತು. ಪೊಲೀಸರ ಟಾರ್ಚರ್ ನಿಂದ ಮಗು ಸಾವನ್ನಪ್ಪಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಂಜುನಾಥ ಹೂಗಾರನನ್ನು ಅಮಾನತ್ತು ಮಾಡಲಾಗಿತ್ತು. ಅಮಾನತು ರದ್ದಾದ ನಂತ್ರ ಮಂಜುನಾಥ ಹೂಗಾರ ಡಿಸಿಬಿ ಪಿ.ಎಸ್.ಐ. ಆಗಿ ಸೇವೆ ಮುಂದುವರೆಸಿದ್ದ. ಅಮಾನತು ರದ್ದಾದ ನಂತ್ರ ಅದೇ ಜೇವರ್ಗಿ ಠಾಣೆಗೆ ನಿಯೋಜಿಸುವಂತೆ ಹಿರಿಯ ಅಧಿಕಾರಿಗಳ ಮನವೊಲಿಸೋದಾಗಿ ಪಟೇಲ ಹಣ ಪಡೆದಿದ್ದ ಎನ್ನಲಾಗಿದೆ.
ಮೋಸ ಎಸಗಿರುವ ಆರೋಪಿ ಕಾಶಿಂ ಪಟೇಲ್ ಎಂಬಾತನನ್ನು ಜೇವರ್ಗಿ ತಾಲೂಕಿನ ಚಿಗರಳ್ಳಿ ಕ್ರಾಸ್ ಬಳಿ ಇರುವ ಬಗ್ಗೆ ಖಚಿತ ಮಾಹಿತಿ ಅರಿತು ಹಿರಿಯ ಪೊಲೀಸ್ ಅಧಿಕಾರಿಗಳ ನಿರ್ದೇಶನ ಮೇರೆಗೆ ದಾಳಿ ನಡೆಸಿ ಬಂಧನ ಮಾಡಲಾಗಿದೆ.