ಕುವೆಂಪು ಬದುಕಿದ್ದರೆ ಈ ಸರ್ಕಾರ ಅವರನ್ನೂ ದೇಶದ್ರೋಹಿಗಳ ಸಾಲಿನಲ್ಲಿ ನಿಲ್ಲಿಸುತಿತ್ತು | Janata news
ಬೆಂಗಳೂರು : ರಾಷ್ಟ್ರಕವಿ ಕುವೆಂಪು ರೈತನನ್ನು ಉಳುವ ಯೋಗಿಗೆ ಹೋಲಿಸಿದ್ದರು. ಒಂದು ವೇಳೆ ಕುವೆಂಪು ಬದುಕಿದ್ದರೆ ಈ ಸರ್ಕಾರ ಅವರನ್ನು ದೇಶದ್ರೋಹಿಗಳ ಸಾಲಿನಲ್ಲಿ ನಿಲ್ಲಿಸುತಿತ್ತು ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದರು.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ರೈತರ ಹೋರಾಟ ನಕಲಿಯಾಗಿದ್ದರೆ ಪ್ರಧಾನಿಯವರು ಮಾತುಕತೆಗೆ ಬನ್ನಿ ಎಂದು ಕರೆಯುತ್ತಿರುವುದು ಯಾರನ್ನು? ಅನ್ನದಾತನನ್ನು ದೇಶದ್ರೋಹಿಗಳ ಸಾಲಿನಲ್ಲಿ ನಿಲ್ಲಿಸಿದ ಸರ್ಕಾರ ರೈತರ ಪರವಾಗಿರಲು ಎಂದೂ ಸಾಧ್ಯವಿಲ್ಲ. ಕೇಂದ್ರದ ರೈತ ವಿರೋಧಿ ಧೋರಣೆಯಿಂದ ಇಂದು ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಅನುಭವಿಸುತ್ತಿದೆ. ಮೋದಿಯವರು ಕಾರ್ಪೋರೆಟ್ ಕಂಪೆನಿಗಳ ದಲ್ಲಾಳಿಯಂತೆ ವರ್ತಿಸುವುದು ಬಿಟ್ಟು ಜನನಾಯಕನಂತೆ ವರ್ತಿಸಲಿ ಎಂದು ಸಲಹೆ ನೀಡಿದ್ದಾರೆ.
ರಾಷ್ಟ್ರಕವಿ ಕುವೆಂಪು ರೈತನನ್ನು ಉಳುವ ಯೋಗಿಗೆ ಹೋಲಿಸಿದ್ದರು. ಒಂದು ವೇಳೆ ಕುವೆಂಪು ಬದುಕಿದ್ದರೆ ಈ ಸರ್ಕಾರ ಅವರನ್ನು ದೇಶದ್ರೋಹಿಗಳ ಸಾಲಿನಲ್ಲಿ ನಿಲ್ಲಿಸುತ್ತಿತ್ತು. ರೈತನನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ಸರ್ಕಾರ, ಕೇಡುಗಾಲಕ್ಕೆ ಅತಿಯಾದ ಬುದ್ದಿ ಎಂಬಂತೆ ವರ್ತಿಸುತ್ತಿದೆ. ಈ ಸರ್ಕಾರವನ್ನು ರೈತರೇ ಇತಿಹಾಸದ ಪುಟ ಸೇರಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಅಹಂಕಾರ ವ್ಯಕ್ತಿತ್ವವನ್ನು ನಾಶ ಮಾಡುತ್ತದೆ. ಆದರೆ ಪ್ರಧಾನಿ ಮೋದಿಯವರ ಅಹಂಕಾರ ದೇಶವನ್ನೇ ನಾಶ ಮಾಡುತ್ತಿದೆ. ರೈತರ ಎದುರು ಪ್ರಧಾನಿಯವರ ಅಹಂಕಾರ ಪ್ರದರ್ಶನ ಒಳ್ಳೆಯದಲ್ಲ. ಮೋದಿಯವರು ಅಹಂಕಾರ ಬದಿಗಿಟ್ಟು ರೈತರ ಪಾಲಿಗೆ ಜೀವ ವಿರೋಧಿಯಾದ ಕಾನೂನುಗಳನ್ನು ರದ್ದು ಮಾಡಲಿ. ಕಾರ್ಪೋರೆಟ್ ಕಂಪೆನಿಗಳ ಜೀತದಾಳು ತಾವಲ್ಲ ಎಂದು ಸಾಬೀತು ಪಡಿಸಲಿ ಎಂದು ಹೇಳಿದರು.