ಭಾರೀ ಅಗ್ನಿ ಅವಘಡ : ಧಗಧಗನೆ ಹೊತ್ತಿ ಉರಿದ ಶಾಪಿಂಗ್ ಕಾಂಪ್ಲೆಕ್ಸ್ | Janata news
ಬಾಗಲಕೋಟೆ : ಇಳಕಲ್ ನಗರದ ಹೃದಯಭಾಗದಲ್ಲಿರುವ ಬೃಹತ್ ವಾಣಿಜ್ಯ ಸಂಕೀರ್ಣ ಸಜ್ಜನ ಆರ್ಕೇಡ್ ನಲ್ಲಿ ಭಾನುವಾರ ತಡರಾತ್ರಿ ಭಾರೀ ಬೆಂಕಿಯ ಅವಘಡ ಸಂಭವಿಸಿದೆ.
ಇಳಕಲ್ನ ಬಸವೇಶ್ವರ ಸರ್ಕಲ್ನಲ್ಲಿರುವ, ಚಂದ್ರಶೇಖರ ಸಜ್ಜನ ಎಂಬವರಿಗೆ ಸೇರಿದ ಶಾಪಿಂಗ್ ಸೆಂಟರ್ ಬೆಂಕಿಯ ಕೆನ್ನಾಲಿಗೆಯಿಂದ ಧಗಧಗನೆ ಹೊತ್ತಿ ಉರಿದಿದೆ.
ಒಟ್ಟು ನಾಲ್ಕು ಅಂತಸ್ತಿನ ಕಟ್ಟಡದಲ್ಲಿ 18 ಮಳಿಗೆಗಳನ್ನು ಬಾಡಿಗೆಗೆ ಕೊಡಲಾಗಿತ್ತು. ಮೋರ್ ಸೂಪರ್ ಮಾರ್ಕೆಟ್, ಹಾರ್ಡ್ವೇರ್ ಅಂಗಡಿ, ಕೇಕ್ ಬೇಕರಿ, ಸರೋದ್ ಇಳಕಲ್ ಸೀರೆ ಅಂಗಡಿ , ಪೀಟರ್ ಇಂಗ್ಲೆಂಡ್ ಬಟ್ಟೆ ಮಳಿಗೆ ಸೇರಿದಂತೆ ಅನೇಕ ಅಂಗಡಿಗಳು ಶಾಪಿಂಗ್ ಮಾಲ್ನಲ್ಲಿ ಇದೆ. ಹಾರ್ಡವೇರ್ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡ ಶಂಕೆ ವ್ಯಕ್ತವಾಗಿದೆ.
ಗುಳೇದಗುಡ್ಡ , ಕುಷ್ಟಗಿ, ಇಳಕಲ್, ಹುನಗುಂದ ಹಾಗೂ ಬಾಗಲಕೋಟೆ ಭಾಗದಿಂದ 8 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿವೆ.
ಘಟನೆಯಿಂದ ಸುಮಾರು 20 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ಇಳಕಲ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.