ಮಹಿಳೆಯ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನಿಸಿದಕ್ಕೆ ವ್ಯಕ್ತಿಯ ಕೊಲೆ | Janata news
ಉಡುಪಿ : ವಿವಾಹಿತ ಮಹಿಳೆಯೊಡನೆ ಸಂಬಂಧ ಪ್ರಶ್ನಿಸಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿ ಕರ್ಜೆ, ಗುಡ್ಡೆಯಂಗಡಿಯಲ್ಲಿ ನಡೆದಿದೆ.
ಮೃತರನ್ನು ಹೊಸೂರು ನಿವಾಸಿ ನವೀನ್ ನಾಯ್ಕ್ (43) ಎಂದು ಗುರುತಿಸಲಾಗಿದೆ. ಮಹಿಳೆ ನವೀನ್ನ ನೆರೆಮನೆಯವಳಾಗಿದ್ದು, ಆಕೆ ತನ್ನ ಮಗ ಶರತ್ ಜೊತೆ ವಾಸವಿದ್ದಳು. ಮಲ್ಪೆ ನಿವಾಸಿ ಗೌತಮ್ ಎಂಬಾತ ಆಗಾಗೆ ಆಕೆಯ ಮನೆಗೆ ಭೇಟಿ ನೀಡುತ್ತಿದ್ದ. ಗೌತಮ್ಗೆ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿದ್ದು, ಇದನ್ನು ನವೀನ್ ಪ್ರಶ್ನಿಸಿದ್ದರು ಎನ್ನಲಾಗಿದೆ.
ನವೀನ್ ಹತ್ಯೆಗೆ ಸಂಬಂಧಿಸಿದಂತೆ , ಅವರ ಪುತ್ರ ನಿತಿನ್ ನಾಯ್ಕ್ (15) ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಕಳೆದ ಕೆಲವು ದಿನಗಳಿಂದ ನೆರೆಮನೆಯ ಮಹಿಳೆ ಮನೆಗೆ ಬರುತ್ತಿದ್ದ ಗೌತಮ್ ಈ ಕೃತ್ಯ ಎಸಗಿರಬಹುದು ಎಂದು ಆರೋಪಿಸಿದ್ದಾರೆ.
ಈ ಬಗ್ಗೆ 15 ದಿನಗಳ ಹಿಂದೆ ಗುಡ್ಡೆಯಂಗಡಿ ಕ್ರಾಸ್ಬಳಿ ಇಬ್ಬರ ನಡುವೆ ಗಲಾಟೆಯು ನಡೆದಿದೆ. ಗಲಾಟೆ ಬಳಿಕ ಸರಸ್ವತಿ ಅವರು ನವೀನ್ ನಾಯ್ಕ ಮನೆಗೆ ತೆರಳಿ ನಾನು ಗೌತಮ್ ಮದುವೆಯಾಗಲಿದ್ದೇವೆ. ನಮ್ಮ ವಿಚಾರದಲ್ಲಿ ಅಡ್ಡಬಂದಲ್ಲಿ ಗೌತಮ್ ನಿಮ್ಮನ್ನು ಕೊಲೆ ಮಾಡಲು ಹಿಂಜರಿಯುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದರಂತೆ ಎನ್ನಲಾಗಿದೆ.
ಫೆ.14ರ ರವಿವಾರದಂದು ಕುಟುಂಬದ ಸದಸ್ಯರು ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ವೇಳೆ ಗೌತಮ್ ಹಾಗೂ ಇತರರು ನಮ್ಮ ನಿವಾಸಕ್ಕೆ ಬಂದಿದ್ದು, ಹತ್ಯೆ ಮಾಡುವ ಉದ್ದೇಶದಿಂದ ತಂದೆಯ ತಲೆಗೆ ಯಾವುದೋ ಆಯುಧದಿಂದ ಹೊಡೆದಿದ್ದಾರೆ ಎಂದು ನಿತಿನ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.