ಹಾವು, ಚೇಳುಗಳು ಸಿಎಂ ಮನೆಯಲ್ಲಿಯೇ ಇವೆ: ಸಿಎಂ ಪುತ್ರ ವಿಜಯೇಂದ್ರಗೆ ಶಾಸಕ ಯತ್ನಾಳ್ ತಿರುಗೇಟು | Janata news
ವಿಜಯಪುರ : ಸಿಎಂ ಹಾವು ಚೇಳುಗಳ ಜೊತೆ ಕೆಲಸ ಮಾಡುತ್ತಿದ್ದಾರೆ ಎಂಬ ವಿಜಯೇಂದ್ರರ ಮಾತಿಗೆ ಟಾಂಗ್ ಕೊಟ್ಟಿರುವ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಹಾವು, ಚೇಳುಗಳು ಸಿಎಂ ಮನೆಯಲ್ಲಿಯೇ ಇವೆ ಎಂದಿದ್ದಾರೆ.
ವಿಜಯಪುರದಲ್ಲಿ ಸೋಮವಾರ ಮಾತನಾಡಿದ ಅವರು, ಸಿಎಂ ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಈಗ ಮುಖ್ಯಮಂತ್ರಿಗಳನ್ನು ಹಿಡಿದಿಟ್ಟುಕೊಂಡಿದ್ದಾರೆ. ಯಡಿಯೂರಪ್ಪ ಪ್ರತಿಪಕ್ಷ ನಾಯಕರಾಗಿದ್ದಾಗ ಅವರ ನಿವಾಸದಲ್ಲಿ ಯಾರೂ ಇರುತ್ತಿರಲಿಲ್ಲ. ಈಗ ಸಿಎಂ ಆದ ನಂತರ ಅವರ ಇಡೀ ಕುಟುಂಬ ಬಂದು ಅವರ ನಿವಾಸ ಸೇರಿ ಬಿಟ್ಟಿದೆ. ಅವರ ಕುಟುಂಬದಿಂದ ಸಿಎಂ ಹೆಸರು ಕೆಡುತ್ತಿದೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಯಡಿಯೂರಪ್ಪನವರ ಸಿಎಂ ಕುರ್ಚಿಗೆ ಹೈಕಮಾಂಡ್ ನಿಂದ ಕುತ್ತು ಬಂದಾಗಲೆಲ್ಲಾ ರಾಜಕೀಯ ಸ್ಥಿರತೆಗೆ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಬಳಸಿಕೊಳ್ಳುತ್ತಾರೆ. ಅವರ ಉದ್ದೇಶ ಪಂಚಮಸಾಲಿ ಲಿಂಗಾಯತರಿಗೆ ಅವಕಾಶ ನೀಡುವುದಲ್ಲ, ಬದಲಿಗೆ ತಮ್ಮ ರಾಜಕೀಯ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದು ಎಂದು ಆರೋಪಿಸಿದರು.
ವಿಶೇಷವಾಗಿ ವಿಜಯೇಂದ್ರ, ಅವರ ಕುಟುಂಬದವರಿಂದ ಸಿಎಂ ಹೆಸರು ಕೆಟ್ಟಿದೆ. ಅವರ ಚೇಲಾಗಳೆಲ್ಲ, ಈಗ ನಿಗಮ, ಮಂಡಳಿ ಅಧ್ಯಕ್ಷ, ನಿರ್ದೇಶಕರಾಗಿದ್ದಾರೆ. ವಿಜಯೇಂದ್ರನ ದೊಡ್ಡ ತಂಡವಿದೆ, ತಮಗೆ ಬೇಡವಾದವರ ನಕಲಿ ಸಿಡಿ ತಯಾರಿಸುವ ಕೇಂದ್ರವಿದೆ. ಈ ಬಗ್ಗೆ ನನ್ನ ಬಳಿ ಮಾಹಿತಿಯಿದೆ, ಹಾವು, ಚೇಳುಗಳೇ ಪಕ್ಷ ಕಟ್ಟಿವೆ ಎಂದು ಕಿಡಿಕಾರಿದ್ದಾರೆ.
ಸರ್ಕಾರದ ಆಡಳಿತದಲ್ಲಿ ಸಂಪೂರ್ಣವಾಗಿ ವಿಜಯೇಂದ್ರ ಹಸ್ತಕ್ಷೇಪವಿದೆ, ಇದಕ್ಕೆ ನಿಗಮ-ಮಂಡಳಿಗಳಿಗೆ ಅಧ್ಯಕ್ಷರಾಗಿ ನೇಮಕವಾಗಿರುವವರೇ ಸಾಕ್ಷಿ, ವಿಜಯೇಂದ್ರ ಅವರ ಕೈ ಕಾಲು ಒತ್ತುವವರನ್ನು, ರಾತ್ರಿ ವ್ಯವಸ್ಥೆ ಮಾಡುವವರಿಗೆ ಅವರಿಗೆ ಬೇಕಾದವರನ್ನು ನೇಮಕ ಮಾಡಲಾಗುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.
ವಿಜಯಪುರದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ಗುರುತಿಸಿರುವ ಜಾಗದ ಬಗ್ಗೆ ಕೂಡ ಅಸಮಾಧಾನ ವ್ಯಕ್ತಪಡಿಸಿದ ಯತ್ನಾಳ್, ಮುಖ್ಯಮಂತ್ರಿ ಯಡಿಯೂರಪ್ಪನವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಅನುದಾನ ಒಟ್ಟು 385 ಕೋಟಿ ರೂಪಾಯಿ ಬಿಡುಗಡೆ ಮಾಡುತ್ತಿದ್ದಾರೆ, ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿಗಳಿಗೆ ಕಾಳಜಿಯಿಲ್ಲ, ವಿಜಯಪುರ ವಿಮಾನ ನಿಲ್ದಾಣ ಅಭಿವೃದ್ಧಿಗೆ ನೀಡಿದ್ದು ಕೇವಲ 95 ಕೋಟಿ ರೂಪಾಯಿ ಎಂದು ಆರೋಪಿಸಿದರು.