ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ವಿದೇಶ ಪ್ರವಾಸಕ್ಕೆ ಸುಪ್ರಿಂಕೋರ್ಟ್ ಷರತ್ತು ಬದ್ಧ ಅನುಮತಿ | Janata news
ನವದೆಹಲಿ : ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ವಿದೇಶ ಪ್ರವಾಸಕ್ಕೆ ಕಡಿವಾಣ ಹಾಕಿದ್ದ ಸುಪ್ರೀಂ ಕೋರ್ಟ್ ಇಂದು ಪ್ರಯಾಣಿಸುವುದಕ್ಕೆ ಷರತ್ತು ಬದ್ಧ ಅನುಮತಿ ನೀಡಿದೆ. ಈ ಅನುಮತಿ ಕೇವಲ 6 ತಿಂಗಳ ಅವಧಿಗೆ ಸ್ಥಿಮಿತ ವಾಗಿದೆ.
ಹಿರಿಯ ವಕೀಲ ಮತ್ತು ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರು ಏರ್ಸೆಲ್-ಮ್ಯಾಕ್ಸಿಸ್, ಐಎನ್ಎಕ್ಸ್ ಮೀಡಿಯಾ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಹೊರಗಿರುವ ಕಾರಣ ವಿದೇಶ ಪ್ರವಾಸ ಮಾಡಲು ನ್ಯಾಯಾಲಯದ ಅನುಮತಿ ಪಡೆಯಬೇಕಾಗಿದೆ.
ಷರತ್ತಿನ ಪ್ರಕಾರ, ಇನ್ನೂ ವಿದೇಶ ಪ್ರವಾಸ ಕೈಗೊಳ್ಳಲು ಕಾರ್ತಿ ಚಿದಂಬರಂ, 2 ಕೋಟಿ ರೂಪಾಯಿ ಮೊತ್ತದ ಠೇವಣಿ ಇಡಬೇಕು ಹಾಗೂ ವಿದೇಶ ಪ್ರವಾಸದ ಸಂಪೂರ್ಣ ವಿವರಗಳನ್ನು ನೀಡಬೇಕಾಗುತ್ತದೆ. ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರೊನ್ನೊಳಗೊಂಡ ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ವಿಸ್ ಅಧಿಕಾರಿಗಳಿಂದ ಸ್ವೀಕರಿಸಿದ್ದ ದಾಖಲೆಗಳನ್ನು ತನಿಖೆಗೆ ಒಳಪಡಿಸಲು ದೆಹಲಿ ಕೋರ್ಟ್ ಸಿಬಿಐಗೆ ಅನುಮತಿ ನೀಡಿತ್ತು.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಆರ್ ಸುಭಾಷ್ ರೆಡ್ಡಿ ಅವರನ್ನೊಳಗೊಂಡ ನ್ಯಾಯಪೀಠವು ಕಾರ್ತಿ ಚಿದಂಬರಂ ಅವರ ವಿದೇಶ ಪ್ರವಾಸದ ವಿವರ ಮತ್ತು ಅವರು ತಂಗಲು ಬಳಸುವ ಸ್ಥಳ ವಿವರಗಳನ್ನು ಒದಗಿಸಬೇಕು ಎಂದು ನಿರ್ದೇಶಿಸಿತು.
2019ರಲ್ಲಿ ಸಿಬಿಐ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಬಂಧಿಸಿ, ಇತರ 13 ಮಂದಿಯ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿತ್ತು. ಬಳಿಕ ಡಿಸೆಂಬರ್ ನಲ್ಲಿ ಪಿ.ಚಿದಂಬರಂ ಗೆ ಜಾಮೀನು ದೊರೆತಿತ್ತು.