ಜುಲೈ 15ರಿಂದ 2021-22ನೇ ಶೈಕ್ಷಣಿಕ ವರ್ಷ ಆರಂಭ: ಸಚಿವ ಸುರೇಶ್ಕುಮಾರ್ | Janata news
ಬೆಂಗಳೂರು : ಜುಲೈ 5ರಂದು ಎಸ್ಎಸ್ಎಲ್ಸಿ ಪರೀಕ್ಷೆ ಮುಗಿಯಲಿದ್ದು, ಜುಲೈ 15ರಿಂದ 2021-22ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಆರಂಭಿಸಲಿದ್ದೇವೆ ಎಂಬುದಾಗಿ ಹೇಳಿದ್ದಾರೆ.
ಧಾರವಾಡದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೂನ್ 21ರಿಂದ ಆರಂಭವಾಗಲಿರುವ ಎಸ್ಎಸ್ಎಲ್ಸಿ ಪರೀಕ್ಷೆ ಜುಲೈ 5ರವರೆಗೆ ನಡೆಯಲಿದೆ, ಒಂದೊಂದು ವಿಷಯಕ್ಕೆ ಒಂದೊಂದು ದಿನ ಅಂತರ ಬಿಡಲಾಗಿದೆ.
ತಿಂಗಳ ಹಿಂದೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ಆಕ್ಷೇಪಣೆ ಇದ್ದರೆ ಅರ್ಜಿ ಸಲ್ಲಿಸುವಂತೆ ಹೇಳಲಾಗಿದ್ದು, ಇದೀಗ ದಿನಾಂಕ ಮುಗಿದಿದೆ. ಹೀಗಾಗಿ ಎಸ್ಎಸ್ಎಲ್ಸಿ ಪರೀಕ್ಷೆ ವೇಳಾಪಟ್ಟಿ ಅಂತಿಮಗೊಳಿಸಿದ್ದೇವೆ. ಕಳೆದ ವರ್ಷದ ಪರೀಕ್ಷೆಗಿಂತ ಈ ವರ್ಷದ ಪರೀಕ್ಷೆಗಳು ಭಿನ್ನವಾಗಿರುತ್ತವೆ ಎಂದರು.
ಜುಲೈ 5ಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆ ಮುಗಿಯುತ್ತವೆ. ಹೀಗಾಗಿ ಜುಲೈ 15ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭಿಸುತ್ತೇವೆ. 1ರಿಂದ 5ನೇ ತರಗತಿ ಆರಂಭ ಮಾಡುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಇನ್ನೊಂದು ವಾರ ತಡೆದು ತೀರ್ಮಾನ ಮಾಡುತ್ತೇವೆ ಎಂದರು.
ಎಲ್ಲವೂ ಸರಿಯಾಗಿ ಇದ್ದಿದ್ದರೆ ಇವತ್ತಿನಿಂದಲೇ 1ರಿಂದ 5ನೇ ತರಗತಿಗಳನ್ನು ಮರು ಆರಂಭಿಸಬಹುದಿತ್ತು. ಆದರೆ ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ಕರೊನಾ ಸೋಂಕಿನ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಈ ಪ್ರಮಾಣ ಹೆಚ್ಚಾಗಿದೆ. ಕರ್ನಾಟಕದಲ್ಲೂ ನಿತ್ಯ 300 ಇರುತ್ತಿದ್ದ ಸೋಂಕಿನ ಪ್ರಕರಣಗಳು 500ಕ್ಕೆ ತಲುಪಿವೆ. ಹೀಗಾಗಿ 1ರಿಂದ 5ನೇ ತರಗತಿ ಮರು ಆರಂಭ ಬಗ್ಗೆ ಇನ್ನೊಂದು ವಾರ ಕಾದು, ಆಮೇಲೆ ನಿರ್ಧರಿಸುವುದಾಗಿ ಸುರೇಶ್ಕುಮಾರ್ ತಿಳಿಸಿದ್ದಾರೆ.