ಇನ್ನೊಂದು ತಿಂಗಳಲ್ಲಿ ಬಿಎಸ್ ವೈ, ಬಿವೈಆರ್, ಈಶ್ವರಪ್ಪ ಹಗರಣ ಬಯಲು: ಶಾಸಕ ಸಂಗಮೇಶ್ | Janata news
ಬೆಂಗಳೂರು : ಇನ್ನೊಂದು ತಿಂಗಳಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ಪುತ್ರ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹಗರಣ, ಅಕ್ರಮ ಆಸ್ತಿಗಳ ವಿವರಗಳನ್ನು ಬಯಲು ಮಾಡುವುದಾಗಿ ಸದನದಿಂದ ಅಮಾನತಾಗಿರುವ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ನಾನು ದಾಖಲೆಗಳನ್ನು ಹಿಡಿದುಕೊಂಡು ಬ್ಲಾಕ್ಮೇಲ್ ಮಾಡುತ್ತಿಲ್ಲ. ಆ ರೀತಿ ಬ್ಲಾಕ್ ಮೇಲ್ ಮಾಡುವ ಜನರೇ ಬೇರೆ. ನಾನೇ ಬೇರೆ. ಬಿಜೆಪಿ ಸರ್ಕಾರ ಎಕ್ಕುಟ್ಟೋಗುತ್ತೆ ನೋಡುತ್ತಾ ಇರಿ. ಇವರಿಂದಾಗಿ ನಮಗೂ ಮರ್ಯಾದೆ ಇಲ್ಲದಾಗಿದೆ. ಜನರ ಸೇವೆ ಮಾಡಿ ಎಂದರೆ ಇಲ್ಲಿ ಮಜಾ ಮಾಡುತ್ತಾರೆ ಎಂದು ಆಡಳಿತ ಪಕ್ಷದ ವಿರುದ್ಧ ಹರಿಹಾಯ್ದರು.
ಸಿಎಂ, ರಾಘವೇಂದ್ರ, ಈಶ್ವರಪ್ಪ ಸಣ್ಣತನದ ರಾಜಕೀಯ ಮಾಡುತ್ತಿದ್ದಾರೆ. ಇವರ ವರ್ತನೆ ಕಂಡು ಶಿವಮೊಗ್ಗ ಜಿಲ್ಲೆಯ ಜನರೇ ಅಸಹ್ಯ ಪಡುತ್ತಿದ್ದಾರೆ. ನಮ್ಮ ಮೇಲೆ, ಕುಟುಂಬದ ಮೇಲೆ ಕೇಸ್ ಹಾಕಿದ್ದಾರೆ.
ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿಸಿದ್ದಾರೆ. ಸ್ಪೀಕರ್ ನಮಗೆ ನ್ಯಾಯ ಕೊಡಿಸಬೇಕು. ಯಡಿಯೂರಪ್ಪ ಸೂಚನೆ ಮೇರೆಗೆ ಸದನದಿಂದ ನನ್ನನ್ನು ಸ್ಪೀಕರ್ ಅಮಾನತು ಮಾಡಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಇವರ ಹಗರಣ ಹೊರಬಂದು ಬಿಜೆಪಿ ಸರ್ಕಾರ ಪತನಗೊಳ್ಳಲಿದೆ. ಬಿಜೆಪಿ ಸರ್ಕಾರ ಪತನಗೊಂಡ ಬಳಿಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದರು.
ನನ್ನ ವಿರುದ್ಧ ದಾಖಲಾದ ಕ್ರಿಮಿನಲ್ ಮೊಕ್ಕದ್ಧಮೆ ಕುರಿತು ಅಧಿವೇಶನದಲ್ಲಿ ಗಮನ ಸೆಳೆಯಲು ಮುಂದಾದೆ. ಆದರೆ, ಸ್ಪೀಕರ್ ನನ್ನ ಮನವಿಗೆ ಮನ್ನಣೆ ಕೊಡಲಿಲ್ಲ. ಶರ್ಟ್ ಬಿಚ್ಚಿದರಾದರೂ ಮನ್ನಣೆ ಕೊಡುತ್ತಾರೆ ಎಂದುಕೊಂಡೆ. ಆದರೆ ಸ್ಪೀಕರ್ ನಡೆದುಕೊಂಡಿದ್ದು ಯಾವ ಪ್ರಜಾಪ್ರಭುತ್ವ ಎಂದು ಪ್ರಶ್ನಿಸಿದ ಅವರು, ಈ ಸರ್ಕಾರಕ್ಕೆ ಎರಡು ಮೂರು ತಿಂಗಳು ಮಾತ್ರ ಆಯುಷ್ಯ ಇರುವುದು ಎಂದು ಭವಿಷ್ಯ ನುಡಿದರು.