ಆರು ಸಚಿವರ ವಿರುದ್ಧ ಮಾನಹಾನಿಕರ ಸುದ್ದಿ ಪ್ರಸಾರಕ್ಕೆ ಮಧ್ಯಂತರ ತಡೆಯಾಜ್ಞೆ | Janata news
ಬೆಂಗಳೂರು : ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ಅವಹೇಳನಾಕಾರಿ ಮತ್ತು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡದಂತೆ ಆದೇಶ ನೀಡುವಂತೆ ಕೋರಿ ಆರು ಮಂದಿ ಸಚಿವರು ಸಲ್ಲಿಸಿದ್ದ ಮನವಿಯನ್ನು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಪುರಸ್ಕರಿಸಿದೆ. ಇದರಿಂದ ಸಚಿವರಿಗೆ ದೊಡ್ಡ ನಿರಾಳತೆ ದೊರಕಿದೆ.
ಮಾರ್ಚ್ 30ರವರೆಗೆ ಮಾನಹಾನಿಕರ ಸುದ್ದಿಗಳ ಪ್ರಸಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಸಿಟಿ ಸಿವಿಲ್ ಕೋರ್ಟ್ ಶನಿವಾರ ಆದೇಶಿಸಿದೆ. ಮಾರ್ಚ್ 30ರಂದು ಈ ಅರ್ಜಿಗಳ ವಿಚಾರಣೆ ಮತ್ತೆ ನಡೆಯಲಿದೆ.
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎಂದು ಹೇಳಲಾದ ಸಿಡಿ ಬಿಡುಗಡೆ ನಂತರ, ಇನ್ನೂ ಹಲವು ಸಚಿವರಿಗೆ ಸಂಬಂಧಿಸಿದ ಮಾನಹಾನಿಕರ ಸುದ್ದಿ ಪ್ರಸಾರವಾಗುವ ಭೀತಿಯಿಂದ, ಅಂತಹ ಸುದ್ದಿ ಪ್ರಸಾರವಾಗುವ ಮೊದಲೇ ನಿರ್ಬಂಧ ವಿಧಿಸುವಂತೆ ಕೋರಿ ಆರು ಸಚಿವರು ಅರ್ಜಿ ಸಲ್ಲಿಸಿದ್ದರು.
ಸಚಿವರಾದ ಶಿವರಾಮ್ ಹೆಬ್ಬಾರ್, ಬಿ.ಸಿ. ಪಾಟೀಲ್, ಎಸ್.ಟಿ. ಸೋಮಶೇಖರ್, ಡಾ. ಕೆ. ಸುಧಾಕರ್, ಡಾ. ಕೆ.ಸಿ. ನಾರಾಯಣಗೌಡ ಹಾಗೂ ಭೈರತಿ ಬಸವರಾಜ್ ಅವರು ತಮ್ಮ ವಿರುದ್ಧ ಮಾಧ್ಯಮಗಳು ವರದಿ ಪ್ರಸಾರ ಮಾಡದಂತೆ ಆದೇಶ ನೀಡುವಂತೆ ಕೋರಿದ್ದರು.