ಹೌದಪ್ಪಾ.. ರಮೇಶ್ ಜಾರಕಿಹೊಳಿಗೆ ಧೈರ್ಯ ಹೇಳಿದ್ದು ನಾನೇ, ತಪ್ಪೇನು ಎಂದ ಎಚ್ಡಿ ರೇವಣ್ಣ | Janata news
ಹಾಸನ : ಸಿಡಿ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ "ನಾನು ಧೈರ್ಯ ಹೇಳಿದ್ದು ನಿಜ ಕಣ್ರಿ.. ರಾಜಕಾರಣಿಗಳಿಗೆ ಮನುಷ್ಯತ್ವ ಇರಬೇಕು" ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ಎಚ್ ಡಿ ರೇವಣ್ಣ, ನಾವು ಮೊದಲು ಮನುಷ್ಯತ್ವನ್ನು ಹೊಂದಿರಬೇಕು ಎಂದರು. ಹೌದ್ರೀ.. ನಾನು ರಮೇಶ್ ಜಾರಕಿಹೊಳಿಗೆ ಧೈರ್ಯ ಹೇಳಿದ್ದು ನಿಜ. ಅವರು ಸಮಾಜದಲ್ಲಿ ಕಷ್ಟಪಟ್ಟು ಬಂದವರು. ನಮಗೆ ಮನುಷ್ಯತ್ವ ಇರಬೇಕು. ಒಳ್ಳೆದು ಕೆಟ್ಟುದ್ದ ದೇವರಿಗೆ ಬಿಟ್ಟಿದ್ದು. ನಾನು ಅವರಿಗೆ ಧೈರ್ಯ ಹೇಳಿದ್ದು ನಿಜ ಎಂದು ರೇವಣ್ಣ ಸ್ಪಷ್ಟಪಡಿಸಿದ್ದಾರೆ.
ಇಲ್ಲಿ ಪಕ್ಷ ಮುಖ್ಯವಾಗುವುದಿಲ್ಲ, ವ್ಯಕ್ತಿ ಮುಖ್ಯನಾಗುತ್ತಾನೆ. ರಾಜಕೀಯವೇ ಬೇರೆ. ಇಲ್ಲಿ ರಾಜಕೀಯ ಮಾಡಬಾರದು. ಅದಕ್ಕಾಗಿಯೇ ನಾವು ಅವರಿಗೆ, ಹೆದರ ಬೇಡ ನಿಮ್ಮ ಜತೆ ನಾವಿದ್ದೇವೆ ಅಂತ ಧೈರ್ಯ ಹೇಳಿದ್ದೇವೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
ಇಲ್ಲಿ ಪಕ್ಷ ಮುಖ್ಯ ಅಲ್ಲ, ಒಳ್ಳೆಯದೋ ಕೆಟ್ಟದೋ ದೇವರು ತೀರ್ಮಾನ ಮಾಡುತ್ತಾನೆ. ನೋವಲ್ಲಿರುವ ವ್ಯಕ್ತಿಗೆ ಧೈರ್ಯವಾಗಿರು ಎಂದು ಹೇಳಿದರೆ ತಪ್ಪೇನಿದೆ ಎಂದು ಪ್ರಶ್ನಿಸಿದರು.
ನೋವಿನಲ್ಲಿರುವ ಮನುಷ್ಯನಿಗೆ ಧೈರ್ಯ ಹೇಳುವುದು ಧರ್ಮ ಅಲ್ಲವೇ. ರಾಜಕೀಯ ಬರುತ್ತೆ ಹೋಗುತ್ತದೆ, ಎಲ್ಲವನ್ನೂ ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಶಾಸಕ ಎಚ್ಡಿ ರೇವಣ್ಣ ಹೇಳಿದ್ದಾರೆ.