ಕೈ ನಾಯಕರು ಶಿವಮೊಗ್ಗ ಜಿಲ್ಲೆ ಪಾಕಿಸ್ತಾನ ಮಾಡಲು ಹೊರಟಿದ್ದಾರೆ: ಸಚಿವ ಶ್ರೀ ರಾಮುಲು ಆರೋಪ | Janata news
ಚಿತ್ರದುರ್ಗ : ಕಾಂಗ್ರೆಸ್ ನಾಯಕರು ಶಿವಮೊಗ್ಗ ಜಿಲ್ಲೆಯನ್ನ ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಆರೋಪಿಸಿದ್ದಾರೆ.
ಚಿತ್ರದುರ್ಗ ತಾಲೂಕಿನ ಬೆಳಗಟ್ಟ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಜೆಟ್ ಸೇರಿ ಯಾವುದೇ ವಿಚಾರದಲ್ಲಿ ಚರ್ಚೆಗೆ ಬರಲಿಲ್ಲ. ಈಗ ಭದ್ರಾವತಿಯಲ್ಲಿ ಧರಣಿ ಮಾಡಲು ಮುಂದಾಗಿದ್ದಾರೆ. ಕಾಂಗ್ರೆಸ್ ನಾಯಕರ ಆಟ ಈಗ ನಡೆಯುವುದಿಲ್ಲ ಎಂದು ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿಜೆಪಿ, ಆರ್ಎಸ್ಎಸ್ನ ಹಲವು ಕಾರ್ಯಕರ್ತರನ್ನ ಹುಡುಕಿ ಜೈಲಿಗೆ ಹಾಕಿಸಿದ್ದರು. ಅಂದಿನ ಮಂಗಳೂರು ಭಾಷಣದಲ್ಲಿ ನಾನು ಹೇಳಿದ್ದೆ, ಕಾಲಚಕ್ರ ಉರುಳುತ್ತದೆ. ಮುಂದೆ ನಮ್ಮ ಕಾರ್ಯಕರ್ತರು ತಲೆ ಎತ್ತಿಕೊಂಡು ಓಡಾಡುವ ಕಾಲ ಬರುತ್ತದೆ ಎಂದು. ಈಗ ಸಂಗಮೇಶ್ ಅವರ ಮಕ್ಕಳು ಮಾಡಿದ ತಪ್ಪಿನ ವಿರುದ್ಧವಾಗಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗಿದೆ. ಆದರೆ ಇದರಲ್ಲಿ ಯಾವುದೇ ಸೇಡಿನ ರಾಜಕಾರಣವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಡಿಕೆಶಿ, ಸಿದ್ದರಾಮಯ್ಯ ಶ್ರೀರಾಮನ ಹೆಸರು ಸಹಿಸುವುದಿಲ್ಲ ಅಂತಾರೆ. ಬಿಜೆಪಿ ರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತದೆ. ಕಾಂಗ್ರೆಸ್ ನಾಯಕರು ಬೌದ್ದಿಕವಾಗಿ, ನೈತಿಕವಾಗಿ ದಿವಾಳಿಯಾಗಿದ್ದಾರೆ ಎಂದು ಲೇವಡಿ ಮಾಡಿದರು.
ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿ, ಮಹಾನ್ ವ್ಯಕ್ತಿ ಯಾರು ಎಂಬುದು ನನಗೆ ಗೊತ್ತಿಲ್ಲ. ಜಾರಕಿಹೊಳಿ ಆರೋಪ ಮುಕ್ತರಾಗಿ ಹೊರ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದರು.