ರಾಜಕೀಯ ನಿವೃತ್ತಿಗೆ ಮುಂದಾದ ಸಾರಾ ಮಹೇಶ್: ಸುದ್ದಿಗೋಷ್ಠಿಯಲ್ಲೇ ಕಣ್ಣೀರಿಟ್ಟ ಸಾರಾ | Janata news
ಮೈಸೂರು : ನೀವೇ ನಮ್ಮ ನಾಯಕರು ಅಂತಲೇ ಹೇಳುತ್ತಾ ಬಂದಿದ್ದೇನೆ. ನಾನು ಯಾವತ್ತೂ ನಿಮ್ಮ ಜತೆ ಪೈಪೋಟಿ ಮಾಡಿಲ್ಲ. ಬನ್ನಿ, ನಾಳೆಯೇ ಜವಾಬ್ದಾರಿ ಹೊತ್ತುಕೊಳ್ಳಿ. ಎಚ್.ಡಿ.ಕುಮಾರಸ್ವಾಮಿ ಜತೆ ಸೇರಿಕೊಂಡು ಪಕ್ಷವನ್ನು ಕಟ್ಟಿ ಎಂದು ಶಾಸಕ ಸಾ.ರಾ.ಮಹೇಶ್ ಅವರು ಪಕ್ಷದ ಚಟುವಟಿಕೆಗಳಿಂದ ದೂರವಾಗಿರುವ ಜಿ.ಟಿ.ದೇವೇಗೌಡ ಅವರಿಗೆ ಆಹ್ವಾನ ನೀಡಿದರು.
ನಗರದ್ಲಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಾರಾ ಮಹೇಶ್, ಜೆಡಿಎಸ್ ಪಕ್ಷದಿಂದ ದೂರ ಉಳಿದಿರುವಂತ ಶಾಸಕ ಜಿಟಿ ದೇವೇಗೌಡ ಅವರನ್ನು ತನ್ನ ಗುರುಗಳು ಎಂಬುದಾಗೇ ಸಂಬೋಧಿಸಿ, ಕಣ್ಣೀರಿಟ್ಟರು.
ನನ್ನಿಂದ ಜಿ.ಟಿ.ದೇವೇಗೌಡರಿಗೆ ತೊಂದರೆ ಆಗಿದೆ ಎಂದು ಚಾಮುಂಡೇಶ್ವರಿ ತಾಯಿ ಮೇಲೆ ಪ್ರಮಾಣ ಮಾಡಲಿ. ಅವರು ಪ್ರಮಾಣ ಮಾಡಿದ್ದೇ ಆದಲ್ಲಿ ನಾನು ರಾಜಕೀಯದಲ್ಲೇ ಇರುವುದಿಲ್ಲ. ಅವರ ಬಗ್ಗೆ ನನಗೆ ಸಾಕಷ್ಟು ಗೌರವ ಇದೆ. ನಾನು ಅವರಿಗೆ ಏನು ಅನ್ಯಾಯ ಮಾಡಿದ್ದೀನಿ? ನನ್ನನ್ನು ಏಕೆ ಪದೇಪದೆ ದೂಷಣೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಶಕುನಿ-ಮಂಥರೆಯ ಮಾತು ಎಂದು ಜಿ.ಟಿ.ದೇವೇಗೌಡರು ಹೇಳಿದ್ದಾರೆ. ಶಕುನಿ ಇಲ್ಲದಿದ್ದರೆ ಮಹಾಭಾರತ ನಡೆಯುತ್ತಿರಲಿಲ್ಲ. ಧರ್ಮರಾಜ್ಯ ಸ್ಥಾಪನೆಯಾಗಿ ದುಷ್ಟಶಕ್ತಿಗಳು ನಿರ್ನಾಮವಾಗುತ್ತಿದ್ದರೇ ಎನ್ನುವ ಮಾತನ್ನು ಹೇಳುತ್ತಲೇ ಭಾವುಕರಾಗಿ ಕಣ್ಣೀರಿಟ್ಟರು. ರಾಮಯಣದಲ್ಲಿ ಮಂಥರೆ ಇಲ್ಲದಿದ್ದರೆ ಶಬರಿಯ ಶಾಪ ವಿಮೋಚನೆಯಾಗುತ್ತಿರಲಿಲ್ಲ, ರಾವಣನ ನಿರ್ನಾಮವೂ ಆಗುತ್ತಿರಲಿಲ್ಲ ಎಂದು ಹೇಳಿದರು.
ಈ ವೇಳೆ ಶಕುನಿ ಪದ ಬಳಸಿದ್ದಕ್ಕೆ ಮನಸ್ಸಿಗೆ ನೋವಾಗಿದೆ ಎಂದ ಸಾ.ರಾ.ಮಹೇಶ್ ಅವರ ಕಣ್ಣಲ್ಲಿ ನೀರು ಸುರಿಯಿತು. ಬಳಿಕ, ತಾವೇ ಸಮಾಧಾನರಾಗಿ ಮಾತು ಮುಂದುವರಿಸಿದರು.
ನೀವು ಸಕ್ರಿಯವಾಗಿಲ್ಲ ಎಂಬ ಕಾರಣ ನಾನು ಸ್ವಲ್ಪ ಓಡಾಡುತ್ತಿದ್ದೇನೆ. ನನ್ನ ಈ ಓಡಾಟದಿಂದ ನಿಮಗೆ ನೋವಾಗಿದ್ದರೆ ದೂರ ಸರಿಯುವೆ. ಇನ್ನು ಮುಂದೆ ಎಂದೂ ಚುನಾವಣೆಗೆ ನಿಲ್ಲಲ್ಲ ಎಂದು ಚಾಮುಂಡಿಬೆಟ್ಟದಲ್ಲಿ ಪ್ರಮಾಣ ಮಾಡಿ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ನೀವು ಕಾರ್ಯಕರ್ತರ ಜತೆ ಸೇರಿಕೊಂಡು ಪಕ್ಷವನ್ನು ಉಳಿಸುವ ಕೆಲಸ ಮಾಡಿ ಎಂದು ಭಾವುಕರಾಗಿ ಕಣ್ಣೀರು ಹಾಕಿದರು.
ಪದೇ ಪದೇ ನಮ್ಮ ವಿರುದ್ಧ ಮಾತನಾಡಿದರೆ ಎಷ್ಟು ಅಂತ ಸಹಿಸೋದು? ನನಗೂ ರಾಜಕಾರಣ ಬೇಸರ ಆಗಿದೆ. ಈ ಜಿಲ್ಲೆಯಲ್ಲಿ ಪಕ್ಷವನ್ನು ಉಳಿಸಿಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ನನ್ನಿಂದ ತಪ್ಪು ಆಗಿದ್ದರೆ ಈ ಅವಧಿ ಮುಗಿದ ಕೂಡಲೇ ರಾಜಕೀಯ ಮತ್ತು ಸಾರ್ವಜನಿಕ ಜೀವದಿಂದ ನಿವೃತ್ತಿಯಾಗುತ್ತೇನೆ ಎಂದರು.